ಬೆಂಗಳೂರು: ವಂದೇ ಭಾರತ್ ರೈಲಿಗೆ ಸಿಲುಕಿ ಖಾಸಗಿ ನರ್ಸಿಂಗ್ ಕಾಲೇಜಿನ ಇಬ್ಬರು ವಿದ್ಯಾರ್ಥಿಗಳು ಸಾವನ್ನಪ್ಪಿದ ಘಟನೆ ಚಿಕ್ಕಬಾಣಾವರ ರೈಲ್ವೆ ನಿಲ್ದಾಣದಲ್ಲಿ ಭಾನುವಾರ ನಡೆದಿದೆ.
ಕೇರಳದ ಮೂಲದ ಸ್ಟೇರ್ಲಿನ್ ಎಲ್ಜಾ ಶಾಜಿ(19), ಜಸ್ಟಿನ್ ಜೋಸೆಫ್(20) ಮೃತಪಟ್ಟವರು. ರೈಲ್ವೆ ನಿಲ್ದಾಣಕ್ಕೆ ಮಧ್ಯಾಹ್ನ 2:30ಕ್ಕೆ ಬಂದಿದ್ದ ಅವರು ಅದೇ ವೇಳೆ ಬೆಂಗಳೂರಿನಿಂದ ಬೆಳಗಾವಿಗೆ ತೆರಳುತ್ತಿದ್ದ ವಂದೇ ಭಾರತ್ ರೈಲಿಗೆ ಸಿಲುಕಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಹೆಸರುಘಟ್ಟ ರಸ್ತೆಯ ಸಪ್ತಗಿರಿ ನರ್ಸಿಂಗ್ ಕಾಲೇಜಿನಲ್ಲಿ ಮೊದಲ ವರ್ಷದ ಬಿಎಸ್ಸಿ ವಿಭಾಗದಲ್ಲಿ ಇಬ್ಬರು ಓದುತ್ತಿದ್ದು, ಕಾಲೇಜು ಸಮೀಪದಲ್ಲೇ ವಾಸವಾಗಿದ್ದಾರೆ. ರೈಲಿಗೆ ಆಕಸ್ಮಿಕವಾಗಿ ಸಿಲುಕಿ ಸಾವನ್ನಪ್ಪಿದ್ದಾರೆಯೇ ಅಥವಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆಯೇ ಎನ್ನುವುದರ ಬಗ್ಗೆ ತನಿಖೆ ನಡೆದಿದೆ. ಯಶವಂತಪುರ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
