ಕಲಬುರಗಿ: ವಿಕಲಚೇತನ ಮಗಳನ್ನು ಹತ್ಯೆಗೈದ ತಂದೆಯೊಬ್ಬ, ಆತ್ಮಹತ್ಯೆ ಎಂದು ಕಥೆ ಕಟ್ಟಿದ್ದ ಘಟನೆ ಕಲಬುರಗಿ ಜಿಲ್ಲೆಯ ಕಲ್ಲಹಂಗರಾ ಗ್ರಾಮದಲ್ಲಿ ನಡೆದಿದೆ.
17 ವರ್ಷದ ಮಂಜುಳಾ ತಂದೆಯಿಂದಲೇ ಕೊಲೆಯಾದ ಮಗಳು. ತಂದೆ ಗುಂಡೇರಾಮ್ ಮಗಳನ್ನೇ ಕೊಲೆಗೈದ ವ್ಯಕ್ತಿ. 17 ವರ್ಷದ ಬಾಲಕಿ ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂದು ಕಲಬುರಗಿ ಠಾಣೆಗೆ ಕರೆ ಬಂದಿತ್ತು. ಘಟನ ಸ್ಥಳಕ್ಕೆ ಹೋಗಿ ನೋಡಿದಾಗ ಪೊಲೀಸರಿಗೆ ಅನುಮಾನ ವ್ಯಕ್ತವಾಗಿದೆ.
ಮೃತಳು ಪಾರ್ಶ್ವವಾಯು ಬಾದಿತಳು ಹಾಗೂ ವಿಕಲಚೇತನಳು. ಎತ್ತರವಾದ ಸ್ಥಳದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಳು. ಡೆತ್ ನೋಟ್ ಕೂಡ ಪತ್ತೆಯಾಗಿತ್ತು. ಸಾವಿನ ಬಗ್ಗೆ ಬಾಲಕಿ ತಾಯಿ ದೂರು ನೀಡಿದ್ದರು. ಹೊಲಕ್ಕೆ ಹೋಗಲು ದಾರಿ ವಿಚಾರವಾಗಿ ಅಕ್ಕಪಕ್ಕದವರಿಗೂ ತಮಗೂ ಜಗಳವಿತ್ತು. ಹಾಗಾಗಿ ದ್ವೇಷದಿಂದ ಅವರೇ ಕೊಲೆ ಮಾಡಿರಬಹುದು ಎಂದು ದೂರು ನೀಡಿದ್ದರು. ಮೃತ ಬಾಲಕಿ ತಂದೆ ವಿಚಾರಣೆ ನಡೆಸಿದಾಗ ಅನುಮಾನ ಮತ್ತಷ್ಟು ಹೆಚ್ಚಿತ್ತು.
ವಿಚಾರಣೆ ತೀವ್ರಗೊಳಿಸಿದಾಗ ಜಮೀನಿಗೆ ಹೋಗುವ ದಾರಿ ವಿಚಾರವಾಗಿ ತಾರ್ಕಿಕ ಅಂತ್ಯ ಹಾಡಲು ವಿಕಲಚೇತನ ಮಗಳನ್ನು ಕೊಲೆಗೈದು ನೇಣು ಬಿಗಿದು, ತಾನೇ ಡೆತ್ ನೋಟ್ ಬರೆದಿಟ್ಟಿದ್ದಾಗಿ ಹಾಗೂ ಆತ್ಮಹತ್ಯೆಗೆ ಕಾರಣ ಪಕ್ಕದ ಜಮೀನಿನವರು ಎಂದು ಡೆತ್ ನೋಟ್ ನಲ್ಲಿ ಉಲ್ಲೇಖಿಸಿದ್ದಾಗಿ ಬಾಯ್ಬಿಟ್ಟಿದ್ದಾನೆ. ಸದ್ಯ ಮೃತ ಬಾಲಕಿಯ ತಂದೆ ಗುಂಡೇರಾಮ್ ನನ್ನು ಪೊಲೀಸರು ಬಂಧಿಸಿದ್ದಾರೆ.
