ರಾಮನಗರ: ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ ‘ಬಿಗ್ ಬಾಸ್’ ಸ್ಪರ್ಧಿ ರಕ್ಷಿತಾ ಶೆಟ್ಟಿಗೆ ಅವಮಾನಕಾರಿ ಹೇಳಿಕೆ ನೀಡಿರುವ ಆರೋಪದ ಹಿನ್ನೆಲೆಯಲ್ಲಿ ‘ಬಿಗ್ ಬಾಸ್’ ನಿರೂಪಕ ಕಿಚ್ಚ ಸುದೀಪ್ ಮತ್ತು ಇಬ್ಬರು ಸ್ಪರ್ಧಿಗಳ ವಿರುದ್ಧ ದೂರು ದಾಖಲಾಗಿದೆ.
ಬೆಂಗಳೂರು ಮೂಲದ ಸಾಮಾಜಿಕ ಹೋರಾಟಗಾರ್ತಿ ಸಂಧ್ಯಾ ಪವಿತ್ರಾ ಎಂಬುವರು ರಾಮನಗರ ಡಿವೈಎಸ್ಪಿ ಕಚೇರಿಯಲ್ಲಿ ದೂರು ದಾಖಲಿಸಿದ್ದಾರೆ. ‘ಬಿಗ್ ಬಾಸ್’ ಸ್ಪರ್ಧಿಗಳಾದ ಅಶ್ವಿನಿ ಗೌಡ ಮತ್ತು ರಿಷಾ ಗೌಡ ವಿರುದ್ಧವೂ ಪ್ರಕರಣ ದಾಖಲಾಗಿದೆ.
ಮೊದಲನೇ ಆವೃತ್ತಿಯಿಂದಲೂ ಕನ್ನಡ ‘ಬಿಗ್ ಬಾಸ್’ ನಿರೂಪಕರಾಗಿ ಕಾರ್ಯನಿರ್ವಹಿಸುತ್ತಿರುವ ಕಿಚ್ಚ ಸುದೀಪ್ ಇತ್ತೀಚೆಗೆ ನಡೆದ ಸಂಚಿಕೆಯೊಂದರಲ್ಲಿ ‘ಬಿಗ್ ಬಾಸ್’ ಸ್ಪರ್ಧಿ ರಕ್ಷಿತಾ ಶೆಟ್ಟಿ ಅವರೊಂದಿಗೆ ಮಾತನಾಡುತ್ತಾ, ಅದೇ ನನ್ನ ಪಿತ್ತ ನೆತ್ತಿಗೆ ಏರುತ್ತಲ್ವಾ, ಅದಕ್ಕಿಂತ ಮೊದಲು ರಕ್ಷಿತಾ ಅವರೇ ನಾನು ಎರಡು ರೀತಿಯಲ್ಲಿ ನಗುತ್ತೇನೆ, ಒಂದು ತುಂಬಾ ನಗು ಬಂದಾಗ, ಇನ್ನೊಂದು ಏರಿದಾಗ ಎನ್ನುವ ಮಾತನಾಡಿದ್ದರು. ಇದು ದರ್ಪದ ಮಾತಾಗಿದೆ. ಇಡೀ ಮಹಿಳಾ ಕುಲಕ್ಕೆ ಮಾಡುತ್ತಿರುವ ಅವಮಾನ ಎಂದು ಆರೋಪಿಸಲಾಗಿದೆ. ನಟ ಕಿಚ್ಚ ಸುದೀಪ್ ವಿರುದ್ಧ ಕ್ರಮ ಕೈಗೊಳ್ಳುವಂತೆ ದೂರುದಾರರು ಮನವಿ ಮಾಡಿದ್ದಾರೆ.
ಅಲ್ಲದೆ ಸ್ಪರ್ಧಿಗಳಾದ ಅಶ್ವಿನಿ ಗೌಡ ತಮ್ಮ ಸ್ಪರ್ಧಿಯಾಗಿರುವ ರಕ್ಷಿತಾ ಶೆಟ್ಟಿ ವಿರುದ್ಧ ಎಸ್ ಕೆಟಗರಿ ಎಂಬ ಪದ ಬಳಸಿದ್ದಾರೆ. ಇದು ಜಾತಿ ಆಧಾರಿತ ಹೇಳಿಕೆಯಾಗಿದೆ ಎಂದು ಆರೋಪಿಸಲಾಗಿದೆ. ಇನ್ನೊಂದಡೆ ಸ್ಪರ್ಧಿ ಗಿಲ್ಲಿ ಮೇಲೆ ರಿಷಾ ಗೌಡ ಹಲ್ಲೆ ಮಾಡಿದ್ದಾರೆ. ಹೀಗಿದ್ದರೂ ಕಾರ್ಯಕ್ರಮದ ಆಯೋಜಕರು ಕ್ರಮ ಕೈಗೊಂಡಿಲ್ಲ. ಈ ಅಂಶಗಳನ್ನು ಪರಿಗಣಿಸಿ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ದೂರು ನೀಡಲಾಗಿದೆ.
