ನವದೆಹಲಿ: ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಎನ್ ಡಿಎ ಮೈತ್ರಿಕೂಟ ಭರ್ಜರಿ ಗೆಲುವಿನತ್ತ ಧಾಪುಗಾಲಿಟ್ಟಿದೆ. ಮಹಾಘಟಬಂಧನ್ ನೆಲಕ್ಕಚ್ಚಿದೆ. ಕಾಂಗ್ರೆಸ್-ಆರ್ ಜೆಡಿ ಮೈತ್ರಿಕೂಟಕ್ಕೆ ತೀವ್ರ ಹಿನ್ನಡೆಯಾಗಿದೆ. ಬಿಹಾರದಲ್ಲಿ ಎನ್ ಡಿಎ ಮೈತ್ರಿಕೂಟದ ಗೆಲುವು ಖಚಿತವಾಗುತ್ತಿದ್ದಂತೆ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ, ಕರ್ನಾಟಕದಲ್ಲಿಯೂ ಮುಂದೆ ಇದೇ ರೀತಿ ಫಲಿತಾಂಶ ಹೊರಬೀಳಲಿದೆ ಎಂದಿದ್ದಾರೆ.
ನವದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಕುಮಾರಸ್ವಾಮಿ, ಬಿಹಾರ ಚುನಾವಣೆಯ ಇಂದಿನ ಫಲಿತಾಂಶ 2028ರಲ್ಲಿ ರಾಜ್ಯದಲ್ಲಿ ಮರುಕಳಿಸಲಿದೆ. ಬಿಜೆಪಿ-ಜೆಡೆಸ್ ಮೈತ್ರಿ ಮುಂದಿನ ಗೆಲುವಿಗೆ ಬುನಾದಿ ಹಾಕಿದೆ ಎಂದು ಹೇಳಿದರು. ಬಿಹಾರದಲ್ಲಿ ಎನ್ ಡಿಎಗೆ ಸಿಕ್ಕ ಗೆಲುವು ಬಿಜೆಪಿಯಲ್ಲಿ ಉತ್ಸಾಹ ಹೆಚ್ಚಿಸಿದೆ. ಕರ್ನಾಟಕದಲ್ಲಿಯೂ ಮುಂಬರುವ ಚುನಾವಣೆಯಲ್ಲಿ ಗೆಲುವು ಸಾಧಿಸಲು ಇದು ಪೂರಕವಾಗಲಿದೆ ಎಂದರು.
ಬಿಹಾರದಲ್ಲಿ ಕಾಂಗ್ರೆಸ್ ಹೆಸರಿಲ್ಲದಂತಾಗಿದೆ. ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದು ಎರಡುವರೆ ವರ್ಷಗಳು ಕಳೆದರೂ ಯಾವುದೇ ಅಭಿವೃದ್ಧಿ ಕೆಲಸ ಮಾಡುತ್ತಿಲ್ಲ. ಅಭಿವೃದ್ಧಿ ಬಗ್ಗೆ ನಿರ್ಲಕ್ಷವಹಿಸುತ್ತಿರುವುದು ರಾಜ್ಯದ ಜನತೆಗೂ ಅರ್ಥವಾಗಿದೆ. ಜನರು ಭ್ರಮನಿರಸನಗೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಆಡಳಿತಕ್ಕೆ ಜನರೇ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಹೇಳಿದರು.
