ಚಿತ್ತಾಪುರದಲ್ಲಿ ಆರಂಭವಾಗಿರುವುದು ಸರ್ವಾಧಿಕಾರಿ ಆಡಳಿತ V/S ಪ್ರಜಾಪ್ರಭುತ್ವದ ನಡುವಿನ ಸಮರ: ಸಂವಿಧಾನ, ಪ್ರಜಾಪ್ರಭುತ್ವ ಉಳಿಸಲು ಬಿಜೆಪಿ ಹೋರಾಟ ಎಂದ ವಿಜಯೇಂದ್ರ

ಬೆಂಗಳೂರು: ಚಿತ್ತಾಪುರದಲ್ಲಿ ಸಂವಿಧಾನದ ಹೆಸರಿನಲ್ಲಿ ಬೊಗಳೆ ಬಿಡುವವರಿಂದಲೇ ಸಾಂವಿಧಾನಿಕ ಹಕ್ಕು ಕಸಿಯಲಾಗುತ್ತಿದೆ. ರಾಷ್ಟ್ರೀಯ ಸ್ವಯಂಸೇವಕ ಸಂಘದ ಶತಮಾನೋತ್ಸವದ ಸಂಭ್ರಮಾಚರಣೆಗೆ ತಹಸೀಲ್ದಾರರ ಮೂಲಕ 12 ಮಾಹಿತಿ ಹಾಗೂ ದಾಖಲೆಗಳನ್ನು ಸಲ್ಲಿಸಿಲ್ಲವೆಂದು ಅನುಮತಿ ನಿರಾಕರಿಸಿರುವ ಪರಿ ಉತ್ತರ ಕೋರಿಯಾದ ತಿಕ್ಕಲು ಸರ್ವಾಧಿಕಾರಿ ಕಿಂಗ್ ಜಾಂಗ್ ಉನ್ ಆಡಳಿತ ವೈಖರಿಯನ್ನು ನೆನಪಿಸುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ವಾಗ್ದಾಳಿ ನಡೆಸಿದ್ದಾರೆ.

ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ದೇಶದ ಮೇಲೆ ತುರ್ತು ಪರಿಸ್ಥಿತಿ ಹೇರಿದ್ದ ಕಾಂಗ್ರೆಸ್ ಪಕ್ಷದ ಕರಾಳ ಇತಿಹಾಸ ಅತ್ಯಂತ ಪ್ರಿಯವಾಗಿರುವಂತಿದೆ, ಈ ಕಾರಣಕ್ಕಾಗಿಯೇ ಕಲಬುರಗಿ ಜಿಲ್ಲೆಯಲ್ಲಿ ತುರ್ತುಪರಿಸ್ಥಿತಿ ನೆನಪಿಸುವ ರೀತಿಯ ಆಡಳಿತವನ್ನು ಜಾರಿಗೆ ತರಲು ಹೊರಟಿದ್ದಾರೆ, ಇದಕ್ಕಾಗಿ ಚಿತ್ತಾಪುರವನ್ನು ಚಿಮ್ಮುವ ಹಲಗೆಯಂತೆ ಪ್ರಯೋಗಿಸುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.

ಡಾ.ಬಾಬಾ ಸಾಹೇಬ್ ಅವರು ರಚಿಸಿದ ಸಂವಿಧಾನದ ಆಶಯ ಹಾಗೂ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಅಣಕಿಸುವ ರೀತಿಯಲ್ಲಿ ಚಿತ್ತಾಪುರದಲ್ಲಿ ಉಸಿರುಗಟ್ಟಿಸುವ ವಾತಾವರಣ ನಿರ್ಮಾಣ ಮಾಡಿದ್ದಾರೆ. ಆರ್.ಎಸ್.ಎಸ್ ಪಥಸಂಚಲನ ಹಾಗೂ ಕಾರ್ಯಕ್ರಮದ ಅನುಮತಿಗೆ ವಿಧಿಸಿರುವ ಷರತ್ತುಗಳನ್ನು ರಾಜ್ಯಕ್ಕೆ ಅನ್ವಯಿಸಿ ಬಿಟ್ಟರೆ ಕರ್ನಾಟಕದ ಯಾವುದೇ ಮೂಲೆಗಳಲ್ಲೂ ಯಾವುದೇ ಸಾಂಸ್ಕೃತಿಕ ಹಾಗೂ ರಾಷ್ಟ್ರಭಕ್ತಿಯ ಕಾರ್ಯಕ್ರಮಗಳನ್ನು ನಡೆಸಲು ಆಸ್ಪದವೇ ಇಲ್ಲದಂಥ ಪರಿಸ್ಥಿತಿ ನಿರ್ಮಾಣವಾಗಲಿದೆ.

ರಾಜ್ಯದಲ್ಲಿ ತುರ್ತು ಪರಿಸ್ಥಿತಿ ಮಾದರಿಯ ಆಡಳಿತ ಹೇರಲು ಕಾಂಗ್ರೆಸ್ ಸರ್ಕಾರ ಯೋಜನೆ ರೂಪಿಸುತ್ತಿದೆ ಅದಕ್ಕೆ ಚಿತ್ತಾಪುರವನ್ನು ಪ್ರಯೋಗಾಲಯ ಮಾಡಿಕೊಂಡಿದೆ. “ಚಿತ್ತಾಪುರದಲ್ಲಿ ಸದ್ಯ ಆರಂಭವಾಗಿರುವುದು ಸರ್ವಾಧಿಕಾರಿ ಆಡಳಿತ V/S ಪ್ರಜಾಪ್ರಭುತ್ವದ ನಡುವಿನ ಸಮರ” ಇದನ್ನು ಸವಾಲಾಗಿ ಸ್ವೀಕರಿಸಿ ಸಂವಿಧಾನ ಹಾಗೂ ಪ್ರಜಾಪ್ರಭುತ್ವ ಉಳಿಸಲು ಭಾರತೀಯ ಜನತಾ ಪಾರ್ಟಿ ಹೋರಾಟ ಕೈಗೆತ್ತಿಕೊಳ್ಳಲಿದೆ ಎಂದು ಹೇಳಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read