ಚಾಮರಾಜನಗರ: ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲೂಕಿನ ಬಿಳಿಗಿರಿರಂಗನ ಬೆಟ್ಟದ ರಂಗನಾಥ ಸ್ವಾಮಿ ದೇವಾಲಯದಲ್ಲಿ ಹುಂಡಿ ಹಣ ಎಣಿಕೆಯ ವೇಳೆ ಕಳ್ಳತನ ಮಾಡಲು ಯತ್ನಿಸಿದ ಮೂವರು ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ.
ಮಂಡ್ಯ ನಗರದ ಶರವಣ, ಗಿರೀಶ ಮತ್ತು ಶ್ರೀನಿವಾಸ ಬಂಧಿತ ಆರೋಪಿಗಳು. ಬಂಧಿತರಿಂದ 63 ಸಾವಿರ ರೂಪಾಯಿ ನಗದು ಹಾಗೂ ವಾಹನ ವಶಕ್ಕೆ ಪಡೆಯಲಾಗಿದೆ. ದೇವಾಲಯದಲ್ಲಿ ಎರಡು ತಿಂಗಳಿಗೊಮ್ಮೆ ಗುಂಡಿ ಹಣ ಎಣಿಕೆ ಕಾರ್ಯ ನಡೆಸಲಾಗುತ್ತದೆ. ಸಿಬ್ಬಂದಿ ಮತ್ತು ಭಕ್ತರು ಸೇರಿ ನಾಣ್ಯ, ನೋಟುಗಳನ್ನು ಪ್ರತ್ಯೇಕಿಸಲು ಸಹಾಯ ಮಾಡುತ್ತಾರೆ.
ಗುರುವಾರ ನಡೆದ ಹುಂಡಿ ಹಣ ಎಣಿಕೆಯ ವೇಳೆ ಈ ಮೂವರು ಸೇರಿಕೊಂಡಿದ್ದು, ಜೇಬಿನಲ್ಲಿ ಹಣ ಹಾಕಿಕೊಂಡು ಮೂತ್ರ ವಿಸರ್ಜನೆ ನೆಪದಲ್ಲಿ ಹೊರಬಂದು ತಮ್ಮ ವಾಹನದಲ್ಲಿ ಹಣ ಇಡುತ್ತಿದ್ದಾಗ ಪೊಲೀಸರು ಬಂಧಿಸಿದ್ದಾರೆ.
ಹಣ ಎಣಿಕೆ ವೇಳೆ ಈ ಮೂವರು ಹಣ ಕಳವು ಮಾಡಿದ ಬಗ್ಗೆ ಅನುಮಾನಗೊಂಡ ದೇವಾಲಯ ಸಿಬ್ಬಂದಿ ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಮೋಹನ್ ಕುಮಾರ್ ಅವರಿಗೆ ಮಾಹಿತಿ ನೀಡಿದ್ದಾರೆ. ಇವರನ್ನು ಗಮನಿಸಿದ ಪೊಲೀಸರು ಹಣದ ಸಮೇತ ಬಂಧಿಸಿದ್ದಾರೆ.