ನವದೆಹಲಿ: ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆ ಬಗ್ಗೆ ಭಾರಿ ಚರ್ಚೆಗಳು ನಡೆಯುತ್ತಿರುವ ಬೆನ್ನಲ್ಲೇ ವಿಪಕ್ಷ ನಾಯಕ ಆರ್.ಅಶೋಕ್ ಹಾಗೂ ಬಿ.ವೈ.ವಿಜಯೇಂದ್ರ ದೆಹಲಿಯಲ್ಲಿ ಬೀಡು ಬೀಟ್ಟಿದ್ದಾರೆ. ಕೆಲ ರಾಜ್ಯ ಬಿಜೆಪಿ ನಾಯಕರು ದೆಹಲಿಯಲ್ಲಿ ವರಿಷ್ಠರನ್ನು ಭೇಟಿಯಾಗಿ ಸಮಾಲೋಚನೆ ನಡೆಸಿದ್ದಾರೆ.
ಈ ನಡುವೆ ದೆಹಲಿ ಪ್ರವಾಸದ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ವಿಪಕ್ಷ ನಾಯಕ ಆರ್.ಅಶೋಕ್, ನಾನು ವಿಜಯೇಂದ್ರ ಬಗ್ಗೆ ದೂರು ನೀಡಲು ಬಂದಿಲ್ಲ ಎಂದು ಹೇಳಿದ್ದಾರೆ.
ನಾನು ಪಕ್ಷದ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ ಅವರನ್ನು ಭೇಟಿಯಾಗಿದ್ದೇನೆ, ರಾಜನಾಥ್ ಸಿಂಗ್ ಅವರನ್ನು ಭೇಟಿಯಾಗಿದ್ದೇನೆ. ನಮ್ಮ ವರಿಷ್ಠರನ್ನು ಭೇಟಿಯಾಗಿದ್ದೇನೆ. ಮೂರು ತಿಂಗಳಿಗೊಮ್ಮೆ ಬಂದು ವರದಿಗಳನ್ನು ನೀಡಲು ಸೂಚಿಸಿದ್ದರು. ಅದರಂತೆ ಬಂದು ವರದಿ ನೀಡಿದ್ದೇನೆ. ರಾಜ್ಯ ಕಾಂಗ್ರೆಸ್ ಆಡಳಿತ ವೈಖರಿ, ರಾಜಕೀಯ ಬೆಳವಣಿಗೆಗಳು, ಪಕ್ಷ ಸಂಘಟನೆ ಮೊದಲಾದ ವಿಷಯಗಳ ಬಗ್ಗೆ ಚರ್ಚೆ ನಡೆಸಲಾಗಿದೆ ಎಂದು ಹೇಳಿದರು.
ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆ ಬಗ್ಗೆ ಯಾವುದೇ ಚರ್ಚೆಯಾಗಿಲ್ಲ. ರಾಜ್ಯಾಧ್ಯಕ್ಷರ ಬದಲಾವಣೆ ಬಗ್ಗೆ ಕೇವಲ ಮಾಧ್ಯಮಗಳಲ್ಲಿ ಬರುತ್ತಿದೆಯಷ್ಟೇ. ಇಲ್ಲಿ ಯಾವುದೇ ಅಂತಹ ಚರ್ಚೆಯಾಗಿಲ್ಲ, ಬದಲಾವಣೆಯ ಅವಶ್ಯಕತೆಯೂ ಇಲ್ಲ. ಬದಲಾವಣೆಯ ಬಗ್ಗೆ ಯಾವುದೇ ಮಾತುಕತೆಗಳು ನಡದೇ ಇಲ್ಲ. ಇನ್ನು ನಾನು ವಿಜಯೇಂದ್ರ ಬಗ್ಗೆ ದೂರು ನೀಡಲು ಬಂದಿಲ್ಲ. ನಮಗೆ 2-3 ತಿಂಗಳಿಗೊಮ್ಮೆ ಬಂದು ವರದಿ ನೀಡಲು ಸೂಚಿಸಿದ್ದರು ಅದರಂತೆ ಬಂದು ವರಿಷ್ಠರನ್ನು ಭೇಟಿಯಾಗಿದ್ದೇನೆ ಎಂದು ಹೇಳಿದರು.