‘ಸಂಜು ವೆಡ್ಸ್ ಗೀತಾ 2’ ಸಿನಿಮಾ ಪ್ರಚಾರಕ್ಕೆ ನಾಯಕಿ ನಟಿ ರಚಿತಾರಾಮ್ ಬರುತ್ತಿಲ್ಲ ಎಂದು ನಿರ್ದೇಶಕ ನಾಗಶೇಖರ್ ಫಿಲ್ಮ್ ಚೇಂಬರ್ ಗೆ ದೂರು ನೀಡಿದ್ದಾರೆ.
ಅಲ್ಲದೇ ರಚಿತಾರಾಮ್ ಅವರ ಕುರಿತಾಗಿ ಅನೇಕ ಆರೋಪಗಳನ್ನೂ ಮಾಡಿದ್ದಾರೆ. ಈ ಕುರಿತಾಗಿ ಸಾಮಾಜಿಕ ಜಾಲತಾಣದಲ್ಲಿ ನಟಿ ರಚಿತಾ ರಾಮ್ ಪೋಸ್ಟ್ ಕಂಚಿಕೊಂಡಿದ್ದಾರೆ.
ಚಿತ್ರದ ಪ್ರಚಾರಕ್ಕೆ ಬರುತ್ತಿಲ್ಲ ಎಂಬ ಆರೋಪದ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ನಿರ್ಮಾಪಕ, ನಿರ್ದೇಶಕ, ನಟರ ಹೇಳಿಕೆಯಿಂದ ಬೇಜಾರಾಗಿದೆ, ಅವರು ನನ್ನ ಬಗ್ಗೆ ಹೇಳಿದ ಮಾತುಗಳಿಂದ ಬಹಳ ಬೇಜಾರಾಗಿದೆ. ಅವರು ನನ್ನ ಬಗ್ಗೆ ತುಂಬಾ ಕೆಟ್ಟದಾಗಿ ಮಾತನಾಡುತ್ತಿದ್ದಾರೆ ಎಂದು ತಿಳಿಸಿದ್ದಾರೆ.
‘ಸಂಜು ವೆಡ್ಸ್ ಗೀತಾ 2’ ಪ್ರಚಾರಕ್ಕೆ ಬರುತ್ತಿಲ್ಲವೆಂದು ರಚಿತಾರಾಮ್ ವಿರುದ್ಧ ಆರೋಪಿಸಲಾಗಿತ್ತು. ನಟ ಶ್ರೀನಗರ ಕಿಟ್ಟಿ, ನಿರ್ದೇಶಕ ನಾಗಶೇಖರ್ ಅವರು ರಚಿತಾ ರಾಮ್ ಅವರ ವಿರುದ್ಧ ಆರೋಪಿಸಿದ್ದರು. ಅಲ್ಲದೆ ಫಿಲ್ಮ್ ಚೇಂಬರ್ ಗೆ ದೂರು ನೀಡಲಾಗಿತ್ತು
ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹಂಚಿಕೊಂಡಿರುವ ನಟಿ ರಚಿತಾರಾಮ್, ಈ ಹಿಂದೆ ‘ಸಂಜು ವೆಡ್ಸ್ ಗೀತಾ 2’ ಬಿಡುಗಡೆಯಾದಾಗ ಪ್ರಚಾರ ಕಾರ್ಯದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದೆ. ಆಗ ಚಿತ್ರದ ನಟ, ನಿರ್ದೇಶಕ ನಿರ್ಮಾಪಕರು ನನ್ನ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದರು. ಈಗ ಅದೇ ನಟ, ನಿರ್ದೇಶಕರು ನನ್ನ ಬಗ್ಗೆ ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ತಿಳಿಸಿದ್ದಾರೆ.
‘ಸಂಜು ವೆಡ್ಸ್ ಗೀತಾ 2’ ಚಿತ್ರೀಕರಣದ ಸಂದರ್ಭದಲ್ಲಿ ನನ್ನ ಮತ್ತೊಂದು ಚಿತ್ರ ಬಿಡುಗಡೆಗೆ ಸಿದ್ಧವಾಗಿತ್ತು. ಆ ಚಿತ್ರದ ಪ್ರಮೋಷನ್ ಪ್ರಚಾರಕ್ಕೆ ಹೋಗಲು ಇದೇ ನಿರ್ದೇಶಕರು ಅವಕಾಶ ನೀಡಿರಲಿಲ್ಲ. ಈಗ ನಾನು ಮತ್ತೊಂದು ಚಿತ್ರದ ಚಿತ್ರೀಕರಣದಲ್ಲಿ ಭಾಗವಹಿಸಿದ್ದೇನೆ. ಆ ಚಿತ್ರದ ನಿರ್ದೇಶಕರು ಚಿತ್ರೀಕರಣದಲ್ಲಿ ಭಾಗವಹಿಸುವಂತೆ ಹೇಳಿದ್ದಾರೆ. ಹೀಗಾಗಿ ಚಿತ್ರೀಕರಣದಲ್ಲಿದ್ದೇನೆ. ಇನ್ನು ‘ಸಂಜು ವೆಡ್ಸ್ ಗೀತಾ 2’ ಸಿನಿಮಾ ಮರು ಬಿಡುಗಡೆಯ ಬಗ್ಗೆ ನಾನು ವಿಡಿಯೋ ಹಂಚಿಕೊಂಡಿದ್ದೆ. ಆದರೆ ಸಿನಿಮಾ ಬಿಡುಗಡೆ ಮುಂದೂಡಿಕೆ ಮಾಡಿ ನನ್ನ ಬಗ್ಗೆ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ರಚಿತಾರಾಮ್ ಬೇಸರ ಹೊರ ಹಾಕಿದ್ದಾರೆ.