ಹಾಸನ: ಆರು ವರ್ಷದ ಮಗಳನ್ನು ನೀರಿನ ತೊಟ್ಟಿಯಲ್ಲಿ ಮುಳುಗಿಸಿ ಹೆತ್ತ ತಾಯಿಯೇ ಕೊಂದಿರುವ ಘಟನೆ ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಜಿನ್ನೇನಹಳ್ಳಿಯಲ್ಲಿ ನಡೆದಿದೆ.
6 ವರ್ಷದ ಸಾನ್ವಿ ಮೃತ ಮಗು. ತಾಯಿ ಶ್ವೇತಾಳೆ ಮಗುವನ್ನು ಕೊಂದಿದ್ದಾಳೆ ಎನ್ನಲಾಗಿದೆ. ಈ ಬಗ್ಗೆ ಶ್ವೇತಾಳ ಪತಿ ರಘು ಆರೋಪ ಮಾಡಿದ್ದಾರೆ. ತನ್ನ ಹೆಂಡತಿ ಬೆಂಗಳೂರಿನಲ್ಲಿ ಗಾರ್ಮೆಂಟ್ಸ್ ಕೆಲಸಕ್ಕೆ ಹೋಗುತ್ತಿದ್ದಳು. ಅಲ್ಲಿ ಕಂಪನಿಯ ಇನ್ಯಾರದೋ ಜೊತೆ ಸಂಬಂಧ ಇಟ್ಟುಕೊಂಡಿದ್ದಾಳೆ. ಕೆಲಸಕ್ಕೆ ಹೋದವಳು ಆಗಾಗ ಮನೆಗೆ ಬರುತ್ತಿರಲಿಲ್ಲ. ಸ್ವಲ್ಪ ದಿನ ಮಗು ನೋಡಿಕೊಳ್ಲುವುದು ಮತ್ತೆ ಬಿಟ್ಟು ಹೋಗುವುದು ಮಾಡುತ್ತಿದ್ದಳು.
ಈಗ ನಿನ್ನೆ ಬೆಂಗಳೂರಿನಿಂದ ಮನೆಗೆ ಬಂದವಳು ಮನೆಯಲ್ಲಿ ಯಾರೂ ಇಲ್ಲದ ವೇಳೆ ತೊಟ್ಟಿಯಲ್ಲಿ ಮಗುವನ್ನು ಮುಳುಗಿಸಿ ಸಾಯಿಸಿದ್ದಾಳೆ. ನಾನು ಮನೆಗೆ ಬಂದು ನೋಡುವಷ್ಟರಲ್ಲಿ ಮಗು ಶವವಾಗಿ ಪತ್ತೆಯಾಗಿದ್ದಾಳೆ. ತನ್ನ ಅಕ್ರಮ ಸಂಬಂಧಕ್ಕೆ ಮಗು ಅಡ್ಡಿ ಎಂಬ ಕಾರಣಕ್ಕೆ ಪತ್ನಿ ಶ್ವೇತಾಳೆ ಮಗುವನ್ನು ಸಾಯಿಸಿದ್ದಾಳೆ ಎಂದು ಕಣ್ಣೀರಿಟ್ಟಿದ್ದಾರೆ.