ಹಾಸನ: ಕೋಳಿ ಕದ್ದಿದ್ದನ್ನು ಪ್ರಶ್ನೆ ಮಾಡಿದ್ದಕ್ಕೆ ವ್ಯಕ್ತಿಯೋರ್ವ ಮಹಿಳೆಗೆ ಚಾಕುವಿನಿಂದ ಇರಿದ ಘಟನೆ ಹಾಸನ ಜಿಲ್ಲೆಯ ಆಲೂರು ತಾಲೂಕಿನ ತಾಳೂರು ಗ್ರಾಮದಲ್ಲಿ ನಡೆದಿದೆ.
ಭೂಮಿಕಾ ಮಾರಣಾಂತಿಕವಾಗಿ ಹಲ್ಲೆಗೊಳಗಾದ ಮಹಿಳೆ. ಮನೆಯಲ್ಲಿದ್ದ ಕೋಳಿ ಕಾಣುತ್ತಿಲ್ಲ ಎಂದು ಭೂಮಿಕಾ ಹುಡುಕಾಡಿದ್ದರು. ಆದರೆ ಕೋಲಿ ಸುಳಿವಿಲ್ಲ. ಕೆಲ ಸಮಯದಲ್ಲೇ ಪಕ್ಕದ ಮನೆಯಿಂದ ಕೊಳಿ ಕೊಕ್ಕರಿಸುತ್ತಿದ್ದ ಶಬ್ದ ಕೇಳಿದೆ. ಪಕ್ಕದ ಮನೆಯ ಜಯಮ್ಮ ಎಂಬುವವರನ್ನು ಕರೆದು ಕೇಳಿದರೆ ಯಾವ ಕೋಳಿಯೂ ಇಲ್ಲ ಎಂದಿದ್ದಾರೆ. ಅನುಮಾನಬಂದು ಭೂಮಿಕಾ ಪಕ್ಕದ ಮನೆಗೆ ಹೋಗಿ ನೋಡಿದಾಗ ಅವರ ಕೋಳಿಯನ್ನು ಚೀಲದಲ್ಲಿ ತುಂಬಿ, ಮಾರಲು ಸಿದ್ಧವಾಗಿರುವುದು ಗೊತ್ತಾಗಿದೆ. ಗಲಾಟೆ ಮಾಡಿ ಭೂಮಿಕಾ ತನ್ನ ಕೋಳಿಯನ್ನು ಬಿಡಿಸಿಕೊಂದು ಬಂದಿದ್ದಾರೆ.
ಘಟನೆ ನಡೆದ ಸ್ವಲ್ಪ ಹೊತ್ತಿನ ಬಳಿಕ ಜಯಮ್ಮನ ಮಗ ಗಿರೀಶ್ ಎಂಬಾತ ಭೂಮಿಕಾ ಮನೆಗೆ ಬಂದು ತನ್ನ ಅಮ್ಮನನ್ನು ಕೋಳಿ ಕಳ್ಳಿ ಎನ್ನುತ್ತೀಯಾ ಎಂದು ಜಗಳ ಮಾಡಿದ್ದಾನೆ. ಅಲ್ಲದೇ ಚಾಕುವಿನಿಂದ ಭೂಮಿಕಾ ಕತ್ತಿಗೆ ಇರಿದಿದ್ದಾನೆ. ಆಕೆಯ ರಕ್ಷಣೆಗೆ ಬಂದ ಮಾವ ಈರೇಶ್ ಮೇಲೂ ಹಲ್ಲೆ ನಡೆಸಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ಗಲಾಟೆ ನಡೆಯುತ್ತಿದಂತೆ ಸ್ಥಳೀಯರು ಆಗಮಿಸಿದ್ದಾರೆ. ಈ ವೇಳೆ ಗಿರೀಶ್ ಸ್ಥಳದಿಂದ ಪರಾರಿಯಾಗಿದ್ದಾನೆ. ಗಾಯಾಳು ಭೂಮಿಕಾಳನ್ನು ಆಲೂರು ಅಸ್ಪತ್ರೆಗೆ ದಾಖಲಿಸಲಾಗಿದೆ.
ಆಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.