ಬೆಂಗಳೂರು: ಸ್ಥಿರಾಸ್ತಿ ನೋಂದಣಿಯಲ್ಲಿ ಅಕ್ರಮ ತಡೆಗೆ ಸರ್ಕಾರ ಮತ್ತಷ್ಟು ಕಠಿಣ ಕ್ರಮ ಕೈಗೊಂಡಿದೆ. ಪ್ಯಾನ್ ಕಾರ್ಡ್ ಗಳನ್ನು ಒಟಿಪಿ ಮೂಲಕ ದೃಢೀಕರಿಸಲು ಮುಂದಾಗಿದೆ.
ಈ ಒಟಿಪಿ ನಮೂದಿಸಿದ ನಂತರ ದಸ್ತಾವೇಜು ಕಾವೇರಿ 2.0 ಸಾಫ್ಟ್ವೇರ್ ನಲ್ಲಿ ಅಪ್ಲೋಡ್ ಆಗಲಿದೆ. ಇಂತಹದೊಂದು ಕೆವೈಸಿ ಪದ್ಧತಿಯನ್ನು ನೋಂದಣಿ ಮತ್ತು ಮುದ್ರಾಂಕ ಇಲಾಖೆ ಹೊಸದಾಗಿ ಜಾರಿಗೆ ತಂದಿದೆ. ಸ್ಥಿರಾಸ್ತಿಗಳ ಕಾಗದ ಪತ್ರಗಳನ್ನು ನಕಲು ಮಾಡಿ ಯಾರದೋ ಆಸ್ತಿಯನ್ನು ಇನ್ಯಾರೋ ಮಾರಾಟ ಮಾಡುವ ನಿಜವಾದ ವಾರಸುದಾರರಿಗೆ ಮತ್ತು ಖರೀದಿದಾರರಿಗೆ ವಂಚನೆ ಮಾಡುವ ದಂಧೆಗೆ ಬ್ರೇಕ್ ಹಾಕಲು ನೋಂದಣಿ ಮತ್ತು ಮುದ್ರಾಂಕ ಇಲಾಖೆ ಕ್ರಮ ಕೈಗೊಂಡಿದೆ.
ಆಧಾರ್ ಮಾದರಿ ಪಾನ್ ಕಾರ್ಡ್ ಒಟಿಪಿ ಬರಲಿದ್ದು, ಕೇಂದ್ರ ಸರ್ಕಾರದಿಂದ ಕಂದಾಯ ಇಲಾಖೆ ಡೇಟಾ ಪಡೆದುಕೊಂಡಿದೆ. ದಸ್ತಾವೇಜು ನೋಂದಣಿಯ ಸಂದರ್ಭದಲ್ಲಿ ಕಾವೇರಿ 2.0 ಸಾಫ್ಟ್ವೇರ್ ಗೆ ದಾಖಲೆ ಅಪ್ಲೋಡ್ ಮಾಡುವಾಗ ಮಾರಾಟಗಾರರು ಖರೀದಿದಾರರು ಕಡ್ಡಾಯವಾಗಿ ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್ ಅಥವಾ ಪಾಸ್ಪೋರ್ಟ್ ಇವುಗಳಲ್ಲಿ ಯಾವುದಾದರೂ ಒಂದನ್ನು ಅಪ್ಲೋಡ್ ಮಾಡಬೇಕಿತ್ತು.
ಹೆಚ್ಚಿನವರು ಆಧಾರ್ ಕಾರ್ಡ್ ಬದಲಿಗೆ ಪಾನ್ ಕಾರ್ಡ್ ಕೊಟ್ಟು ನೋಂದಣಿ ಮಾಡಿಸುತ್ತಿದ್ದಾರೆ. ಆಧಾರ್ ಗೆ ಒಟಿಪಿ ಬರುವ ಕಾರಣಕ್ಕೆ ನಕಲು ಮಾಡಿ ಮೋಸ ಮಾಡಲು ಸಾಧ್ಯವಿಲ್ಲ. ಪಾನ್ ಕಾರ್ಡ್ ಮತ್ತು ಪಾಸ್ ಪೋರ್ಟ್ ಗೆ ಒಟಿಪಿ ಬಾರದ ಕಾರಣ ನಕಲು ಮಾಡಿ ವಂಚನೆಗೆ ಬಳಸುವ ಸಾಧ್ಯತೆ ಇದೆ. ಹೀಗಾಗಿ ಪಾನ್ ಕಾರ್ಡ್ ಗೆ ಒಟಿಪಿ ಮೂಲಕ ದೃಢೀಕರಿಸಲು ಕಂದಾಯ ಇಲಾಖೆ ಕ್ರಮ ಕೈಗೊಂಡಿದೆ. ಹೊಸದಾಗಿ ಆಧಾರ್ ಮಾದರಿಯಲ್ಲಿ ಪ್ಯಾನ್ ಕಾರ್ಡ್ ಗೂ ಒಟಿಪಿ ಕೆವೈಸಿ ಪರಿಚಯಿಸಿದೆ ಎನ್ನಲಾಗಿದೆ.