ಕಾರವಾರ: ಪೊಲೀಸರ ಮೇಲೆಯೇ ಹಲ್ಲೆ ಮಾಡಿ ಪರಾರಿಯಾಗಲು ಯತ್ನಿಸಿದ ಇಬ್ಬರು ಆರೋಪಿಗಳ ಕಾಲಿಗೆ ಗುಂಡು ಹಾರಿಸಿ ವಶಕ್ಕೆ ಪಡೆಯಲಾಗಿದೆ.
ಮಂಗಳೂರು ಮೂಲದ ತಲ್ಲತ್ತ ಮತ್ತು ನವಫಾಲ್ ಗುಂಡೇಟು ತಿಂದ ಆರೋಪಿಗಳು. ಇಬ್ಬರೂ ಜನವರಿ 29ರಂದು ರಾಮನಗುಳಿ ಸಮೀಪ ರಾಷ್ಟ್ರೀಯ ಹೆದ್ದಾರಿ ಬಳಿ ಪತ್ತೆಯಾಗಿದ್ದ ಕಾರ್ ನಲ್ಲಿ ಸಿಕ್ಕ ಒಂದು ಕೋಟಿ ರೂ ಪ್ರಕರಣದಲ್ಲಿ ಬಂಧಿತರಾಗಿದ್ದರು.
ಸ್ಥಳ ಮಹಜರು ನಡೆಸಲು ಆರೋಪಿಗಳನ್ನು ಅಂಕೋಲಾ ಕಡೆಗೆ ಕರೆದೊಯ್ಯುವಾಗ ಪೊಲೀಸರ ಮೇಲೆಯೇ ದಾಳಿ ನಡೆಸಿ ಪರಾರಿಯಾಗಲು ಮುಂದಾಗಿದ್ದಾರೆ. ಈ ವೇಳೆ ಅಂಕೋಲಾ ಪೊಲೀಸರು ಆತ್ಮರಕ್ಷಣೆಗಾಗಿ ಆರೋಪಿಗಳ ಕಾಲಿಗೆ ಗುಂಡು ಹಾರಿಸಿದ್ದಾರೆ.
ಘಟನೆಯಲ್ಲಿ ಮೂವರು ಪೊಲೀಸರ ಕಾಲಿಗೆ ಮತ್ತು ತಲೆಗೆ ಗಾಯಗಳಾಗಿದ್ದು, ಗಾಯಾಳುಗಳನ್ನು ಹಳಿಯಾಳ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಉತ್ತರ ಕನ್ನಡ ಎಸ್ಪಿ ನಾರಾಯಣ್ ಅವರು ಆಸ್ಪತ್ರೆಗೆ ಭೇಟಿ ನೀಡಿದ್ದಾರೆ. ಹಣ ಇದ್ದ ಕಾರ್ ಪತ್ತೆಯಾದ ತಿಂಗಳ ನಂತರ ಮುಂಬೈನಲ್ಲಿ ಆರೋಪಿಗಳನ್ನು ಬಂಧಿಸಲಾಗಿತ್ತು.