ಕಾರವಾರ: ಮನೆಯ ಬಳಿ ಆಟವಾಡುತ್ತಿದ್ದ ಮಗು ಆಕಸ್ಮಿಕವಾಗಿ ನಾಲೆಗೆ ಬಿದ್ದು ಸಾವನ್ನಪ್ಪಿರುವ ಘೋರ ಘಟನೆ ಉತ್ತರ ಕನ್ನಡ ಜಿಲ್ಲೆಯಲ್ಲಿ ನಡೆದಿದೆ.
ಭಟ್ಕಳ ತಾಲೂಕಿನ ಜಾಲಿ ಪಟ್ಟಡಲ್ಲಿ ಈ ದುರಂತ ಸಂಭವಿಸಿದೆ. 2 ವರ್ಷದ ಕಂದಮ್ಮ ನಾಲೆಯಲ್ಲಿ ಬಿದ್ದು ಕೊಚ್ಚಿ ಹೋಗಿದ್ದಾಳೆ. ಪೋಷಕರ ನಿರ್ಲಕ್ಷವೇ ಘಟನೆಗೆ ಕಾರಣ ಎನ್ನಲಾಗಿದೆ.
ತೌಸಿಫ್ ಹಾಗೂ ಅರ್ಜು ದಂಪತಿಯ ಎರಡು ವರ್ಷದ ಮಗಳು ಆಟವಾಡುತ್ತಾ ಒಬ್ಬಳೇ ಮನೆಯಿಂದ ಹೊರಬಂದಿದ್ದಾಳೆ. ಹೀಗೆ ಬಂದವರು ಮನೆಯ ಬಳಿ ನಾಲೆ ಬಳಿ ಹೋಗಿದ್ದರೂ ಪೋಷಕರು ಗಮನಿಸಿಲ್ಲ. ಆಕಸ್ಮಿಕವಾಗಿ ಮಗು ನಾಲೆಗೆ ಬಿದ್ದಿದ್ದಾಳೆ. ಇದನ್ನು ಕಂಡ ಸ್ಥಳೀಯರು ತಕ್ಷಣ ಮಗುವನ್ನು ರಕ್ಷಿಸಲು ಯತ್ನಿಸಿ ಮೇಲಕೆತ್ತಿದ್ದಾರೆ. ಕೂಡಲೇ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಮಗು ಬದುಕುಳಿಯಲಿಲ್ಲ.
ಮಗು ಆಟವಾಡುತ್ತಾ ಮನೆಯ ಬಳಿಯ ನಾಲೆಯತ್ತ ಹೋಗುತ್ತಿರುವ ಸಿಸಿಕ್ಯಾಮರಾದ ದೃಶ್ಯ ಬೆಳಕಿಗೆ ಬಂದಿದೆ. ಮಗುವೊಂದೆ ಆಟವಾಡುತ್ತಾ ಮನೆಯಿಂದ ಹೊರ ಹೋದರೂ ಪೋಷಕರು ಗಮನಿಸದಿರುವುದೇ ದುರಂತಕ್ಕೆ ಕಾರಣ ಎನ್ನಲಾಗಿದೆ.