ಬೆಂಗಳೂರು: ಬಿಜೆಪಿ ಶಾಸಕ ಪ್ರಭು ಚೌಹಾಣ್ ಪುತ್ರನ ವಿರುದ್ಧ ಮದುವೆಯಾಗುವುದಾಗಿ ನಂಬಿಸಿದ ಆರೋಪದ ಮೇಲೆ ದೂರು ನೀಡಲಾಗಿದೆ.
ಪ್ರಭು ಚೌಹಾಣ್ ಪುತ್ರ ಪ್ರತೀಕ್ ಚೌಹಾಣ್ ವಿರುದ್ಧ ಮಹಿಳಾ ಆಯೋಗಕ್ಕೆ ನೊಂದ ಯುವತಿ ದೂರು ನೀಡಿದ್ದಾರೆ. ಮದುವೆಯಾಗುವುದಾಗಿ ನಂಬಿಸಿ ಮೋಸ ಮಾಡಲಾಗಿದೆ ಎಂದು ಮಹಿಳಾ ಆಯೋಗಕ್ಕೆ ದೂರು ನೀಡಲಾಗಿದ್ದು, 2023ರ ಡಿಸೆಂಬರ್ 25ರಂದು ಪೋಷಕರು ಯುವತಿಯ ಜೊತೆಗೆ ನಿಶ್ಚಿತಾರ್ಥ ಮಾಡಿದ್ದರು. ಎರಡೂ ಮನೆಯವರು ಮದುವೆಗೆ ಒಪ್ಪಿ ನಿಶ್ಚಿತಾರ್ಥ ನೆರವೇರಿಸಿದ್ದರು.
ನಿಶ್ಚಿತಾರ್ಥದ ನಂತರ ಪ್ರತೀಕ್ ಜೊತೆಗೆ ಹೊಂದಾಣಿಕೆಗಾಗಿ ಬೇರೆ ಬೇರೆ ಸ್ಥಳಗಳಿಗೆ ಪೋಷಕರು ಕಳುಹಿಸಿ ಕೊಟ್ಟಿದ್ದರು. ಮಹಾರಾಷ್ಟ್ರದ ಲಾತೂರಿಗೆ ಯುವತಿಯನ್ನು ಪ್ರತೀಕ್ ಕರೆದುಕೊಂಡು ಹೋಗಿದ್ದ. ಈ ವೇಳೆ ಪ್ರತಿಕ್ ಚೌಹಾಣ್ ಒತ್ತಾಯಪೂರ್ವಕವಾಗಿ ದೈಹಿಕ ಸಂಪರ್ಕ ಬೆಳೆಸಿದ್ದಾರೆ. ನಂತರ ಮದುವೆಗೆ ಒತ್ತಾಯ ಮಾಡಿದರೆ ಮದುವೆ ಮುಂದೂಡಿದ್ದಾರೆ. ಅವರ ಮನೆಗೆ ಹೋಗಿ ನನ್ನ ಪೋಷಕರು ಕೇಳಿದರೆ ಗಲಾಟೆ ಮಾಡಿದ್ದಾರೆ. ನಮ್ಮ ಮನೆಯವರನ್ನು ಬಡವರು ಎಂದು ಹೀಯಾಳಿಸಿದ್ದಾರೆ. ಈ ಕುರಿತು 2025ರ ಜುಲೈ 6ರಂದು ದೂರು ನೀಡಲು ಹೋಗಿದ್ದೆವು. ಔರಾದ್ ನ ಹೋಕ್ರಾಣ್ ಠಾಣೆಗೆ ದೂರು ಕೊಡಲು ಹೋಗಿದ್ದೆವು. ಆದರೆ ಪೊಲೀಸರು ದೂರನ್ನು ಸ್ವೀಕರಿಸಿಲ್ಲ. ಹೀಗಾಗಿ ನೊಂದ ಯುವತಿ ಮಹಿಳಾ ಆಯೋಗಕ್ಕೆ ದೂರು ನೀಡಿದ್ದಾರೆ ಎನ್ನಲಾಗಿದೆ.