ಶಿವಮೊಗ್ಗ: ಶಿವಮೊಗ್ಗ ಜಿಲ್ಲೆ ರಿಪ್ಪನ್ ಪೇಟೆ ಸಮೇಪದ ಅರಸಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಯ ತಮ್ಮಡಿಕೊಪ್ಪದಲ್ಲಿ ಮಹಿಳೆಯೊಂದಿಗೆ ಯುವಕ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಗುರುವಾರ ನಡೆದಿದೆ.
ತಮ್ಮಡಿಕೊಪ್ಪದ ಸುಜಾತ(33), ಆಯನೂರು ಕೋಟೆ ನಿವಾಸಿ ಸಚಿನ್(24) ಆತ್ಮಹತ್ಯೆ ಮಾಡಿಕೊಂಡವರು. 13 ವರ್ಷಗಳ ಹಿಂದೆ ಸುಜಾತ ಅವರನ್ನು ಶಿರಸಿ ಯುವಕನ ಜೊತೆಗೆ ಮದುವೆ ಮಾಡಿಕೊಟ್ಟಿದ್ದು, ಇಬ್ಬರು ಮಕ್ಕಳಿದ್ದಾರೆ. ಪತಿಯಿಂದ ದೂರವಾಗಿದ್ದ ಸುಜಾತ ಎರಡು ವರ್ಷದಿಂದ ತವರು ಮನೆಯಲ್ಲಿ ವಾಸವಾಗಿದ್ದರು. ಆಯನೂರು ಕೋಟೆಯ ಸಚಿನ್ ಪರಿಚಯವಾಗಿದ್ದು, ಕಳೆದ ಒಂದು ವಾರದಿಂದ ತಮ್ಮಡಿಕೊಪ್ಪದ ಸುಜಾತ ಮನೆಯಲ್ಲಿ ಸಚಿನ್ ವಾಸವಾಗಿದ್ದ. ಗುರುವಾರ ಮನೆಯಲ್ಲಿ ಯಾರೂ ಇಲ್ಲದ ವೇಳೆ ಇಬ್ಬರು ವಿಷ ಸೇವಿಸಿದ್ದಾರೆ. ಇದನ್ನು ಗಮನಿಸಿದ ಕುಟುಂಬದವರು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಫಲಕಾರಿಯಾಗದೆ ಇಬ್ಬರು ಮೃತಪಟ್ಟಿದ್ದಾರೆ. ರಿಪ್ಪನ್ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.