ಹುಬ್ಬಳ್ಳಿ: ಕಮ್ಯೂನಿಸ್ಟ್ ಮೈಂಡ್ ಸೆಟ್ ನ ಕೆಲ ಸ್ವಾಮೀಜಿಗಳು ಹಿಂದೂ ಧರ್ಮದಿಂದ ಲಿಂಗಾಯಿತರನ್ನು ದೂರ ಮಾಡಲು ಸಂಚು ರೂಪಿಸಿದ್ದಾರೆ ಎಂದು ಶಾಸಕ ಬಸನ ಗೌಡ ಪಾಟೀಲ್ ಯತ್ನಾಳ್ ಆರೋಪಿಸಿದ್ದಾರೆ.
ಹುಬ್ಬಳ್ಳಿಯಲ್ಲಿ ವೀರಶೈವ ಲಿಂಗಾಯಿತ ಏಕತಾ ಸಮಾವೇಶದ ಬಗ್ಗೆ ಪ್ರತಿಕ್ರೊಯಿಸಿದ ಯತ್ನಾಳ್, ಲಿಂಗಾಯಿತ ಹಾಗೂ ವೀರಶೈವ ಸಮುದಾಯಗಳ ನಡುವೆ ಸಾಮ್ಯತೆಯಿದೆ. ಕೆಲ ಸ್ವಾಮೀಜಿಗಳು ತಮ್ಮ ಸ್ವಾರ್ಥಕ್ಕಾಗಿ ವೀರಶೈವ ಹಾಗೂ ಲಿಂಗಾಯಿತ ಸಮುದಾಯಗಳ ನಡುವೆ ಕಂದಕ ನಿರ್ಮಿಸಲು ಹೊರಟಿದ್ದಾರೆ. ಅವರಿಗೆ ಲಿಂಗಾಯಿತ ಅಥವಾ ಶೈವರ ಉದ್ಧಾರದಲ್ಲಿ ಆಸಕ್ತಿಯಿಲ್ಲ. ಬದಲಾಗಿ ಅವರು ಇಡೀ ವೀರಶೈವ-ಲಿಂಗಾಯಿತ ಸಮುದಾಯವನ್ನು ಸನಾತನ ಹಿಂದೂ ಧರ್ಮದಿಂದ ದೂರ ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದರು.
ಹಿಂದೂ ಧರ್ಮದ ಪದ್ಧತಿ, ಆಚರಣೆಗಳನ್ನು ಅವಮಾನಿಸುವುದೇ ಕೆಲ ಮಠಾಧೀಶರ ಉದ್ಯೋಗವಾಗಿದೆ. ಬಸವಣ್ಣನವರ ತತ್ವಗಳನ್ನು ತಮ್ಮ ಸ್ವಾರ್ಥಕ್ಕಾಗಿ ಬಳಸಿಕೊಳ್ಳುವುದೇ ಅವರಿಗೆ ಚಾಳಿಯಾಗಿದೆ. ಹಿಂದೂ ಧರ್ಮ, ಬಸವಣ್ಣನ ತತ್ವಗಳನ್ನು ಅವಮಾನ ಮಾಡುವ ನೀವು ಪಾದ ಪೂಜೆ ಯಾಕೆ ಮಾಡಿಸಿಕೊಳ್ಳುತ್ತೀರಿ? ಎಂದು ಪ್ರಶ್ನಿಸಿದರು.