ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ ಅಂಗವಾಗಿ ಇಂದು ಗಜಪಡೆ ಆಗಮಿಸಲಿದೆ. ಎರಡನೇ ಹಂತದಲ್ಲಿ ಇಂದು ಐದು ಆನೆಗಳ ಗಜಪಡೆ ಆಗಮಿಸಲಿದೆ.
ಶ್ರೀಕಂಠ, ರೂಪಾ, ಗೋಪಿ, ಸುಗ್ರೀವ, ಹೇಮಾವತಿ ಆನೆಗಳು ಆಗಮಿಸಲಿದೆ. ಸಂಜೆ 4 ಗಂಟೆಗೆ ಅರಮನೆಯನ್ನು ಗಜಪಡೆ ಪ್ರವೇಶಿಸಲಿದ್ದು, ಸ್ವಾಗತಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ.
ಮೊದಲ ಹಂತದಲ್ಲಿ ಒಂಬತ್ತು ಆನೆಗಳು ಮೈಸೂರಿಗೆ ಆಗಮಿಸಿವೆ. ಈ ಬಾರಿ ಮೈಸೂರು ದಸರಾ ಮಹೋತ್ಸವದಲ್ಲಿ ಒಟ್ಟು 14 ಆನೆಗಳು ಭಾಗಿಯಾಗಲಿದ್ದು, ಮೊದಲ ಹಂತದಲ್ಲಿ ಒಂಬತ್ತು ಗಂಡಾನೆಗಳು, ಎರಡು ಹೆಣ್ಣಾಣೆಗಳು ಆಗಮಿಸಿವೆ. ಅಭಿಮನ್ಯು, ಭೀಮ, ಕಂಜನ್, ಧನಂಜಯ, ಪ್ರಶಾಂತ್, ಮಹೇಂದ್ರ, ಏಕಲವ್ಯ, ಕಾವೇರಿ, ಲಕ್ಷ್ಮಿ ಆನೆಗಳು ಭಾಗವಹಿಸಿವೆ.
ಮೈಸೂರು ದಸರಾ ಮಹೋತ್ಸವದಲ್ಲಿ ಭಾಗಿಯಾದ ಆನೆಗಳು, ಮಾವುತರು, ಕಾವಡಿಗಳ ಜೊತೆಗೆ ಅರಣ್ಯಾಧಿಕಾರಿಗಳನ್ನು ಒಳಗೊಂಡಂತೆ ಅರಣ್ಯ ಇಲಾಖೆಯಿಂದ 2.04ಕೋಟಿ ರೂಪಾಯಿ ವಿಮೆ ಮಾಡಿಸುವ ಮೂಲಕ ಆರ್ಥಿಕ ಭದ್ರತೆ ಒದಗಿಸಲಾಗಿದೆ. ಅಂಬಾರಿ ಹೊರುವ ಅಭಿಮನ್ಯು ಆನೆ ಸೇರಿದಂತೆ ಎಲ್ಲಾ ಗಂಡಾನೆಗಳಿಗೆ ತಲಾ 5 ಲಕ್ಷ ರೂಪಾಯಿ ಸೇರಿ 50 ಲಕ್ಷ ರೂಪಾಯಿ ವಿಮೆ ಮಾಡಿಸಲಾಗಿದೆ. ದಸರಾ ಆನೆಗಳಿಂದ ಸಾರ್ವಜನಿಕರಿಗೆ ತೊಂದರೆಯಾದಲ್ಲಿ, ಸಾರ್ವಜನಿಕ ಆಸ್ತಿಪಾಸ್ತಿಗಳಿಗೆ ದಸರಾ ಆನೆಗಳಿಂದ ನಷ್ಟವಾದರೂ 50 ಲಕ್ಷ ರೂ. ವಿಮೆ ಪರಿಹಾರ ಸಿಗಲಿದೆ.