ಪತಿಯನ್ನು ಜೈಲಿಗೆ ಕಳಿಸುವುದಾಗಿ ಪತ್ನಿ ಪೋಸ್ಟ್‌ ; ಕಸ್ಟಡಿಗೆ ಹೋಗಿ ಬಂದ ಮರುದಿನವೇ ಸೂಸೈಡ್‌ !

ಉತ್ತರ ಪ್ರದೇಶದ ಬರೇಲಿಯಲ್ಲಿ 28 ವರ್ಷದ ರಾಜ ಆರ್ಯ ಎಂಬ ವ್ಯಕ್ತಿಯೊಬ್ಬರು ತಮ್ಮ ದೂರವಾದ ಪತ್ನಿಯ ದೂರಿನ ಮೇರೆಗೆ ರಾತ್ರಿ ಪೋಲಿಸ್ ಕಸ್ಟಡಿಯಲ್ಲಿ ಕಳೆದ ನಂತರ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತ ರಾಜ ಆರ್ಯ ತನ್ನ ತಾಯಿಗೆ “ಅಮ್ಮಾ, ನಾನು ಶಾಶ್ವತವಾಗಿ ಮಲಗಲು ಹೋಗುತ್ತಿದ್ದೇನೆ” ಎಂದು ಹೇಳಿದ್ದಾಗಿ ತಿಳಿದುಬಂದಿದೆ.

ರಾಜ ಮತ್ತು ಆತನ ಪತ್ನಿ ಸಿಮ್ರಾನ್ ನಡುವೆ ಸಂಬಂಧ ಹದಗೆಟ್ಟಿತ್ತು ಎಂದು ಕುಟುಂಬದವರು ತಿಳಿಸಿದ್ದಾರೆ. ಪತ್ನಿಯ ಮಾನಸಿಕ ಕಿರಿಕಿರಿಯಿಂದಲೇ ರಾಜ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಕುಟುಂಬ ಗಂಭೀರ ಆರೋಪ ಮಾಡಿದೆ. ಅಷ್ಟೇ ಅಲ್ಲದೆ, ಪೊಲೀಸ್ ಅಧಿಕಾರಿಯಾಗಿದ್ದ ಸಿಮ್ರಾನ್‌ನ ಸಹೋದರ ರಾಜನನ್ನು ಕಸ್ಟಡಿಯಲ್ಲಿ ಹಲ್ಲೆ ಮಾಡಿದ್ದಾನೆ ಎಂದೂ ಆರೋಪಿಸಲಾಗಿದೆ. ಸಿಮ್ರಾನ್ ಇನ್‌ಸ್ಟಾಗ್ರಾಮ್‌ನಲ್ಲಿ “ನೀನು 10.30 ರೊಳಗೆ ಜೈಲಿಗೆ ಹೋಗುತ್ತೀಯ. ಶುಭವಾಗಲಿ, ಈಗ ನೀನು ಜೈಲಿಗೆ ಹೋಗು” ಎಂದು ಪೋಸ್ಟ್ ಮಾಡಿದ ನಂತರ ಆಕೆ ರಾಜನ ವಿರುದ್ಧ ದೂರು ನೀಡಿದ್ದಾಗಿ ಕುಟುಂಬ ಹೇಳಿದೆ.

ಒಂದು ವರ್ಷದ ಹಿಂದೆ ವಿವಾಹವಾಗಿದ್ದ ಈ ದಂಪತಿಗೆ ಒಂದು ಗಂಡು ಮಗುವಿದೆ. ಆದರೆ ಅವರ ವೈವಾಹಿಕ ಜೀವನದಲ್ಲಿ ಬಿರುಕು ಕಾಣಿಸಿಕೊಂಡಿತ್ತು. ಆತ್ಮಹತ್ಯೆಗೆ ಎರಡು ದಿನಗಳ ಮೊದಲು, ಡೆಹ್ರಾಡೂನ್‌ನಲ್ಲಿ ನಡೆಯುವ ಮದುವೆಗೆ ಸಿಮ್ರಾನ್‌ನನ್ನು ಕರೆತರಲು ರಾಜ ಆಕೆಯ ತವರು ಮನೆಗೆ ಹೋಗಿದ್ದನು. ಆದರೆ ಸಿಮ್ರಾನ್‌ನ ಕುಟುಂಬ ಆಕೆಯನ್ನು ಕಳುಹಿಸಲು ನಿರಾಕರಿಸಿತು. ಅಲ್ಲದೆ, ಸಿಮ್ರಾನ್‌ನ ಸಹೋದರರು ರಾಜ ಮತ್ತು ಅವರ ತಂದೆಯ ಮೇಲೆ ಹಲ್ಲೆ ಮಾಡಿದರು ಎಂದು ರಾಜನ ಸಹೋದರಿ ಆರೋಪಿಸಿದ್ದಾರೆ.

ಬರೇಲಿಗೆ ಹಿಂದಿರುಗಿದ ನಂತರ, ಸಿಮ್ರಾನ್‌ ಕುಟುಂಬ ರಾಜ ಮತ್ತು ಆತನ ಕುಟುಂಬದ ವಿರುದ್ಧ ಮಹಿಳಾ ಪೊಲೀಸ್ ಠಾಣೆಯಲ್ಲಿ ಹಲ್ಲೆ ದೂರು ದಾಖಲಿಸಿತು. ನಂತರ ರಾಜನನ್ನು ವಿಚಾರಣೆಗೆ ಕರೆಸಲಾಯಿತು. ಅಲ್ಲಿ ರಾಜನನ್ನು ರಾತ್ರಿಯಿಡೀ ವಶದಲ್ಲಿಟ್ಟುಕೊಂಡು ಸಿಮ್ರಾನ್‌ನ ಸಹೋದರ ಮತ್ತು ಇತರ ಪೊಲೀಸರು ಹಲ್ಲೆ ನಡೆಸಿದರು ಎಂದು ಕುಟುಂಬದವರು ಕಣ್ಣೀರಿಡುತ್ತಾ ಆರೋಪಿಸಿದ್ದಾರೆ. ಇದರಿಂದ ತೀವ್ರವಾಗಿ ಮನನೊಂದಿದ್ದ ರಾಜ ಗುರುವಾರ ಮನೆಗೆ ಹಿಂದಿರುಗಿದ ನಂತರ ನೇಣಿಗೆ ಶರಣಾಗಿದ್ದಾನೆ.

ರಾಜನ ಸಹೋದರಿ ಸಿಮ್ರಾನ್ ಮದುವೆಯ ನಂತರ ಬೇರೊಬ್ಬರೊಂದಿಗೆ ಸಂಬಂಧ ಹೊಂದಿದ್ದಳು ಮತ್ತು ಹೆಚ್ಚಿನ ಸಮಯ ಆತನೊಂದಿಗೆ ದೂರವಾಣಿಯಲ್ಲಿ ಮಾತನಾಡುತ್ತಿದ್ದಳು ಎಂದು ಆರೋಪಿಸಿದ್ದಾಳೆ. ಕುಟುಂಬದ ಒತ್ತಡದಿಂದ ರಾಜ ಸಿಮ್ರಾನ್‌ನನ್ನು ಮದುವೆಯಾಗಿದ್ದನು ಎಂದು ಆಕೆ ದುಃಖದಿಂದ ಹೇಳಿದ್ದಾಳೆ.

ಈ ಘಟನೆಯನ್ನು ಸರ್ಕಲ್ ಆಫೀಸರ್ ಅಜಯ್ ಕುಮಾರ್ ದೃಢಪಡಿಸಿದ್ದು, ಕುಟುಂಬದಿಂದ ಅಧಿಕೃತ ದೂರು ಬಂದ ನಂತರ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ. ಈ ಘಟನೆಯು ಪೊಲೀಸ್ ಕಸ್ಟಡಿಯಲ್ಲಿನ ವ್ಯಕ್ತಿಯ ಸುರಕ್ಷತೆ ಮತ್ತು ಕೌಟುಂಬಿಕ ಕಲಹಗಳು ಯಾವ ದುರಂತ ಅಂತ್ಯವನ್ನು ಕಾಣಬಹುದು ಎಂಬುದರ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read