ಉತ್ತರ ಪ್ರದೇಶದ ಮೀರತ್ನಲ್ಲಿ ವೈದ್ಯಕೀಯ ನಿರ್ಲಕ್ಷ್ಯದ ಪ್ರಕರಣ ಬೆಳಕಿಗೆ ಬಂದಿದೆ. ವೈದ್ಯ ನಿದ್ರಿಸುತ್ತಿದ್ದರಿಂದ ಸಕಾಲಕ್ಕೆ ಚಿಕಿತ್ಸೆ ಸಿಗದ ಕಾರಣ ರೋಗಿಯೊಬ್ಬರು ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.
ಮೀರತ್ನ ಲಾಲಾ ಲಜಪತ್ ರಾಯ್ ಸ್ಮಾರಕ(ಎಲ್ಎಲ್ಆರ್ಎಂ) ವೈದ್ಯಕೀಯ ಕಾಲೇಜಿನ ಕಿರಿಯ ವೈದ್ಯರೊಬ್ಬರು ತುರ್ತು ವಾರ್ಡ್ನೊಳಗೆ ಮೇಜಿನ ಮೇಲೆ ಕಾಲುಗಳನ್ನು ಇಟ್ಟುಕೊಂಡು ಮಲಗಿದ್ದಾರೆ. ಗಾಯಗೊಂಡ ರೋಗಿಯೊಬ್ಬರು ರಕ್ತದ ಮಡುವಿನಲ್ಲಿ ಹತ್ತಿರದ ಸ್ಟ್ರೆಚರ್ ಮೇಲೆ ಇದ್ದರೂ ಅವರು ಗಮನಿಸದೆ ಮಲಗಿದ್ದು, ಸಕಲಾಕ್ಕೆ ಚಿಕಿತ್ಸೆ ಸಿಗದೇ ರೋಗಿ ಮೃತಪಟ್ಟಿದ್ದಾರೆ.
ಜುಲೈ 27-28 ರಂದು ತಡರಾತ್ರಿ ನಡೆದ ಈ ಘಟನೆಯು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ ಮತ್ತು ಪಶ್ಚಿಮ ಉತ್ತರ ಪ್ರದೇಶದ ಅತಿದೊಡ್ಡ ಸರ್ಕಾರಿ ಆಸ್ಪತ್ರೆಗಳಲ್ಲಿ ಒಂದರಲ್ಲಿ ತುರ್ತು ವೈದ್ಯಕೀಯ ಆರೈಕೆಯ ಸ್ಥಿತಿಯ ಬಗ್ಗೆ ಪ್ರಶ್ನಿಸುವಂತೆ ಮಾಡಿದೆ.
ರೋಗಿಯನ್ನು ಹಸನ್ಪುರ ಗ್ರಾಮದ ನಿವಾಸಿ ಸುನಿಲ್ ಎಂದು ಗುರುತಿಸಲಾಗಿದೆ. ಅವರ ಕುಟುಂಬದ ಪ್ರಕಾರ, ಸುನಿಲ್ ರಸ್ತೆ ದಾಟುತ್ತಿದ್ದಾಗ ಅಪರಿಚಿತ ವಾಹನ ಡಿಕ್ಕಿ ಹೊಡೆದು ಗಂಭೀರ ಗಾಯಗೊಂಡಿದ್ದಾರೆ. ಅವರನ್ನು ಎಲ್ಎಲ್ಆರ್ಎಂ ವೈದ್ಯಕೀಯ ಕಾಲೇಜಿನ ತುರ್ತು ವಿಭಾಗಕ್ಕೆ ಕರೆದೊಯ್ಯಲಾಗಿದೆ. ಆದರೆ ಕರ್ತವ್ಯದಲ್ಲಿದ್ದ ವೈದ್ಯರು ನಿದ್ರಿಸುತ್ತಿದ್ದರಿಂದ ಚಿಕಿತ್ಸೆ ನೀಡಲಿಲ್ಲ. ಸಕಾಲಕ್ಕೆ ಚಿಕಿತ್ಸೆ ಸಿಗದೇ ತೀವ್ರ ರಕ್ತಸ್ರಾವದಿಂದ ಸುನಿಲ್ ಸಾವನ್ನಪ್ಪಿದರು ಎಂದು ಅವರ ಕುಟುಂಬ ಹೇಳಿದೆ.
ಕಾಲೇಜು ಆಡಳಿತವು ತ್ವರಿತ ಕ್ರಮ ಕೈಗೊಂಡಿದ್ದು, ಘಟನೆಯ ಸಮಯದಲ್ಲಿ ಕರ್ತವ್ಯದಲ್ಲಿದ್ದ ಇಬ್ಬರು ಕಿರಿಯ ವೈದ್ಯರಾದ ಮೂಳೆಚಿಕಿತ್ಸಾ ವಿಭಾಗದ ಡಾ. ಭೂಪೇಶ್ ಕುಮಾರ್ ರೈ ಮತ್ತು ಡಾ. ಅನಿಕೇತ್ ಅವರನ್ನು ಅಮಾನತುಗೊಳಿಸಲಾಗಿದೆ ಎಂದು ಎಲ್ಎಲ್ಆರ್ಎಂ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲ ಡಾ. ಆರ್. ಸಿ ಗುಪ್ತಾ ದೃಢಪಡಿಸಿದ್ದಾರೆ.