ಡೆಹ್ರಾಡೂನ್: ಉತ್ತರಾಖಂಡದಾದ್ಯಂತ ವರುಣಾರ್ಭಟ ಜೋರಾಗಿದ್ದು, ಸಾಲು ಸಾಲು ಅನಾಹುತಗಳು ಸಂಭವಿಸುತ್ತಿವೆ. ಉತ್ತರ ಕಾಶಿಯ ಯಮುನೋತ್ರಿ ಹೆದ್ದಾರಿಯ ಪಾಲಿಗಢದ ಓಜ್ರಿ ದಬರ್ ಕೋಟ್ ನಡುವಿನ ಸಿಲೈ ಬಾಂಡ್ ಬಳಿ ಸಂಭವಿಸಿದ ಮೇಘಸ್ಫೋಟದಲ್ಲಿ 9 ಕಾರ್ಮಿಕರು ನಾಪತ್ತೆಯಾಗಿದ್ದಾರೆ.
ಕಟ್ಟಡ ನಿರ್ಮಾಣ ಕೆಲಸಕ್ಕೆಂದು ಬಂದಿದ್ದ ಕಾರ್ಮಿಕರು ಸಿಲೈ ಬಾಂಡ್ ಬಳಿ ಡೇರೆಗಳನ್ನು ಹಾಕಿಕೊಂಡು ವಾಸವಾಗಿದ್ದರು. ಏಕಾಏಕಿ ಸಂಭವಿಸಿದ ಮೇಘಸ್ಫೋಟದಲ್ಲಿ ಪ್ರವಾಹದಂತೆ ನೀರು ಹರಿದುಬಂದಿದ್ದು, 9 ಕಾರ್ಮಿಕರು ಕಣ್ಮರೆಯಾಗಿದ್ದಾರೆ.
ಎಸ್ ಡಿ ಆರ್ ಎಫ್, ಎನ್ ಡಿ ಆರ್ ಎಫ್ ತಂಡ ಸ್ಥಳಕ್ಕೆ ಧಾವಿಸಿದ್ದು, ರಕ್ಷಣಾ ಕಾರ್ಯಾಚರಣೆಯಲ್ಲಿ ನಿರತವಾಗಿದೆ. ಯಮುನೋತ್ರಿಗೆ ತೆರಳುವ ರಾಷ್ಟ್ರೀಯ ಹೆದ್ದಾರಿಗೆ ಪ್ರವೇಶ ನಿರ್ಬಂಧಿಸಲಾಗಿದೆ. ನಾಪತ್ತೆಯಾದವರಲ್ಲಿ ಮಹಿಳೆ ಕೂಡ ಸೇರಿದ್ದಾರೆ.
ಉತ್ತರಾಖಂಡದ ವಿವಿಧೆಡೆ ಭಾರಿ ಮಳೆಯಿಂದಾಗಿ ಜನಜೀವನ ಸಂಪೂರ್ಣ ಅಸ್ತವ್ಯಸ್ಥಗೊಂಡಿದೆ.