ಲಿವ್ ಇನ್ ಸಂಬಂಧದಲ್ಲಿದ್ದ ಯುವತಿಯನ್ನು ಆಕೆಯ ತಂದೆ ಹಾಗೂ ಸಹೋದರ ಹತ್ಯೆಗೈದು, ಬೆಂಕಿ ಹಚ್ಚಿರುವ ಘಟನೆ ಮುಜಾಫರ್ ನಗರದಲ್ಲಿ ನಡೆದಿದೆ.
ಮಗಳನ್ನು ಕತ್ತು ಹಿಸುಕಿ ಕೊಂದ ತಂದೆಗೆ ಸಹೋದರ ಕೂಡ ಸಾತ್ ನೀಡಿದ್ದಾನೆ. ಮೃತದೇಹವನ್ನು ಕಾಡಿಗೆ ಎಳೆದೊಯ್ದು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ. ಎರಡು ದಿನಗಳ ಬಳಿಕ ತಂದೆ ಮಗಳು ನಾಪತ್ತೆಯಾಗಿದ್ದಾಳೆ ಎಂದು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ತನಿಖೆ ನಡೆಸಿದ ಪೊಲೀಸರಿಗೆ ಸತ್ಯ ಸಂಗತಿ ಬಯಲಾಗಿದೆ.
ಇ-ಕಾಮರ್ಸ್ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಯುವತಿ, 2019ರಲ್ಲಿ ವಿವಾಹವಾಗಿದ್ದಳು. ಆದರೆ ಎರಡು ವರ್ಷಗಳ ಬಳಿಕ ಪತಿಯಿಂದ ದೂರಾಗಿದ್ದಳು. ಈ ವೇಳೆ ಯುವತಿಯ ಕುಟುಂಬದವರು ಆಕೆಗೆ ಬೇರೊಂದು ವಿವಾಹ ಮಾಡಲು ಪ್ರಯತ್ನಿಸಿದ್ದರು. ಆದರೆ ಸಾಧ್ಯವಾಗಿರಲಿಲ್ಲ. 2022ರಲ್ಲಿ ಯುವತಿ ಗುರುಗ್ರಾಮದಲ್ಲಿ ಅಮಿತ್ ಎಂಬಾತನ ಜೊತೆ ವಾಸಿಸುತ್ತಾ ಆತನೊಂದಿಗೆ ಲಿವಿಂಗ್ ರಿಲೇಷನ್ ಶಿಪ್ ನಲ್ಲಿದ್ದಳು. ವಿಷಯ ತಿಳಿದು ಮನೆಯವರು ತೀವ್ರ ವಿರೋಧ ಮಾಡಿದ್ದರು. ಈ ವಿಚಾರವಾಗಿ ಆಗಾಗ ಮನೆಯವರನ್ನು ಒಪ್ಪಿಸಲು ಯುವತಿ ಯತ್ನಿಸಿದ್ದಳು. ಅದರಂತೆ ತನ್ನ ಕುಟುಂಬ ತಮ್ಮ ಸಂಬಂಧವನ್ನು ಒಪ್ಪಿಕೊಳ್ಳುವಂತೆ ಮನವೊಲಿಸಲು ಯುವತಿ ಮನೆಗೆ ಬಂದಿದ್ದಳು. ಮೇ 26ರಂದು ಅಮಿತ್ ಗೆ ಕರೆ ಮಾಡಿದ್ದ ಯುವತಿ ಇದು ತನ್ನ ಕೊನೆಯ ಪ್ರಯತ್ನ ಮನೆಯವರನ್ನು ಒಪ್ಪಿಸಲು ಯತ್ನಿಸುತ್ತಿದ್ದೇನೆ ಎಂದಿದ್ದಳು. ಅದಾದ ಬಳಿಕ ಯುವತಿಯ ಸುಳಿವಿರಲಿಲ್ಲ.
ಮೇ 29-30ರ ರಾತ್ರಿ ಯುವತಿಯನ್ನು ಆಕೆಯ ತಂದೆ ರಾಜ್ ವೀರ್ ಸಿಂಗ್ ಹಾಗೂ ಸಹೋದರ ಸುಮಿತ್ ಸಿಂಗ್ (24) ಸೇರಿ ಕತ್ತು ಹಿಸುಕಿ ಕೊಲೆ ಮಾಡಿದ್ದಾರೆ. ಬಳಿಕ ಮನೆಯಿಂದ 5 ಕಿ.ಮೀ ದೂರದ ಕಾಡಿಗೆ ಶವವನ್ನು ಎಳೆದೊಯ್ದು ಬೆಂಕಿ ಹಚ್ಚಿದ್ದಾರೆ. ಬಳಿಕ ಎರಡು ದಿನಗಳ ನಂತರ ಕುಟುಂಬದವರು ಆಕೆ ನಾಪತ್ತೆಯಾಗಿದ್ದಾಳೆ ಎಂದು ದೂರು ನೀಡಿದ್ದಾರೆ.
ಜೂನ್ 3ರಂದು ಮಹಿಳೆಯೊಬ್ಬರ ಶವ ಅರೆಬೆಂದ ಸ್ಥಿತಿಯಲ್ಲಿ ಕಾಡಿನಲ್ಲಿ ಪತ್ತೆಯಾಗಿತ್ತು. ಶವದ ಕೈಯಲ್ಲಿದ್ದ ಬಳೆ ದೂರಿನಲ್ಲಿ ನೀಡಿದ್ದ ಫೋಟೋದ ಕೈಲಿದ್ದ ಬಳೆಗೆ ಹೋಲುತ್ತಿತ್ತು. ಈ ಬಗ್ಗೆ ತನಿಖೆ ನಡೆಸಿದಾಗ ಅದು ರಾಜ್ ವೀರ್ ಸಿಂಗ್ ಮಗಳ ಶವ ಎಂಬುದು ಗೊತ್ತಾಗಿದೆ. ಮರ್ಯಾದಾ ಹತ್ಯೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮೃತ ಯುವತಿಯ ತಂದೆ ಹಾಗೂ ಸಹೋದರನನ್ನು ಬಂಧಿಸಿದ್ದಾರೆ.