ಯಾದಗಿರಿ: ನಕಲಿ ದಾಖಲೆ ಸೃಷ್ಟಿಸಿ ಸರ್ಕಾರದ ಆಸ್ತಿಯನ್ನು ಬೇರೆಯವರಿಗೆ ಅನಧಿಕೃತವಾಗಿ ನೋಂದಣಿ ಮಾಡಿಕೊಟ್ಟು ದಾಖಲೆ ನಾಶಪಡಿಸಲು ಮುಂದಾಗಿದ್ದ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.
ಯಾದಗಿರಿ ನಗರಸಭೆಯ ಇಬ್ಬರು ಹಾಗೂ ಶಹಾಪುರ ನಗರಸಭೆಯ ಓರ್ವ ಸಿಬ್ಬಂದಿಯನ್ನು ಬಂಧಿಸಲಾಗಿದೆ. ಕಂದಾಯ ನಿರೀಕ್ಷಕ ಮಾನಪ್ಪ ಬಡಿಗೇರ, ಪ್ರಭಾರ ಕಂದಾಯ ನಿರೀಕ್ಷಕ ಮೈನುದ್ದೀನ್ ಮೊಹಮ್ಮದ್ ಹಜರತ್, ಶಹಾಪುರ ನಗರಸಭೆ ನೀರು ಸರಬರಾಜು ವಿಭಾಗದ ಮೇಲ್ವಿಚಾರಕ ಹನುಮಂತಪ್ಪ ಬಂಧಿತ ಆರೋಪಿಗಳಾಗಿದ್ದಾರೆ.
ಯಾದಗಿರಿ ಸೀಮಾಂತರದ ಸರ್ವೆ ನಂಬರ್ 151ರ ನಿವೇಶನ ಸಂಖ್ಯೆ 42 ಅನ್ನು ಮಲ್ಲಮ್ಮ ರಾಮಣ್ಣ ಎನ್ನುವವರ ಹೆಸರಿಗೆ ಈ ಮೂವರು ನೋಂದಣಿ ಮಾಡಿಕೊಟ್ಟಿದ್ದರು. ಮಲ್ಲಮ್ಮ ಅವರಿಗೆ ಅಕ್ರಮವಾಗಿ ನಿವೇಶನ ನೋಂದಣಿ ಮಾಡಿಕೊಟ್ಟ ಬಗ್ಗೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ವಿಚಾರಣೆ ನಡೆಸಿ ಸೂಕ್ತ ಕಾನೂನು ಕ್ರಮಕ್ಕೆ ಆದೇಶಿಸಲಾಗಿತ್ತು.
ಈ ಹಿನ್ನೆಲೆಯಲ್ಲಿ ಈ ಮೂವರು ರಜೆ ದಿನ ಭಾನುವಾರ ನಗರಸಭೆ ಕಚೇರಿಗೆ ನುಗ್ಗಿ ದಾಖಲೆಗಳನ್ನು ನಾಶಪಡಿಸಲು ಹುನ್ನಾರ ನಡೆಸಿದ್ದರು. ಕಳೆದ ಭಾನುವಾರ ಕಾವಲುಗಾರನನ್ನು ಬೆದರಿಸಿ ಬೀಗ ತೆಗೆದುಕೊಂಡು ಕಚೇರಿಗೆ ಬಂದು ಹಲವು ಕಡತಗಳನ್ನು ಪರಿಶೀಲಿಸಿ ಅಕ್ರಮ ಎಸಗಿದ್ದು ಸಿಸಿ ಟಿವಿಯಲ್ಲಿ ಸೆರೆಯಾಗಿತ್ತು. ನಗರಸಭೆ ಪೌರಾಯುಕ್ತ ಉಮೇಶ ಚೌಹಾಣ್ ಅವರು ಯಾದಗಿರಿ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಸರ್ಕಾರ ಮತ್ತು ಇಲಾಖೆಗೆ ಮೋಸ ಮಾಡಿದ್ದಾರೆ ಎಂದು ದೂರು ನೀಡಲಾಗಿದ್ದು, ಅದರ ಅನ್ವಯ ಮೂವರನ್ನು ಬಂಧಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.