ಬೆಂಗಳೂರು: ಬೆತ್ತಲಾಗಿ ಬಂದು ಮೊಬೈಲ್ ಮಾರಾಟ ಮಳಿಗೆಯ ಹಿಂಬದಿ ಗೋಡೆ ಕರೆ ಕೊರೆದು 85 ಮೊಬೈಲ್ ದೋಚಿದ್ದ ಆರೋಪಿಯನ್ನು ಬೊಮ್ಮನಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಅರಕೆರೆಯಲ್ಲಿ ವಾಸವಾಗಿರುವ ಅಸ್ಸಾಂ ಮೂಲದ ಇಕ್ರಂ ಉಲ್ ಹಸನ್ ಬಂಧಿತ ಆರೋಪಿ. ಆರೋಪಿಯಿಂದ ಕಳವು ಮಾಡಿದ ಮೊಬೈಲ್ ಗಳನ್ನು ಜಪ್ತಿ ಮಾಡಲಾಗಿದೆ. ಮೇ 9ರಂದು ತಡರಾತ್ರಿ ಹೊಂಗಸಂದ್ರ ಸಮೀಪದ ದಿನೇಶ್ ಎಂಬುವರಿಗೆ ಸೇರಿದ ಹನುಮಾನ್ ಟೆಲಿಕಾಂ ಮೊಬೈಲ್ ಶಾಪ್ ನಲ್ಲಿ ಕಳವು ಮಾಡಿದ್ದ. ಬಟ್ಟೆ ಗಲೀಜಾಗುತ್ತದೆ ಎಂದು ಬೆತ್ತಲಾಗಿ ಬಂದ ಹಸನ್ ಹಿಂಬದಿ ಗೋಡೆ ಕೊರೆದು ಕಳವು ಮಾಡಿದ್ದ. ತನಿಖೆ ಕೈಗೊಂಡ ಪೊಲೀಸರು ತಾಂತ್ರಿಕ ಮಾಹಿತಿ ಆಧರಿಸಿ ಆರೋಪಿಯನ್ನು ಬಂಧಿಸಿದ್ದಾರೆ.
ಆರೋಪಿ ಹಸನ್ ಮೂರು ತಿಂಗಳ ಹಿಂದೆ ಕೆಲಸ ಹುಡುಕಿಕೊಂಡು ಬಂದು ಅರಕೆರೆಯಲ್ಲಿ ನೆಲೆಸಿದ್ದ. ಮೊದಲು ಸೆಂಟ್ರಲ್ ಮಾಲ್ ನಲ್ಲಿ ಕೆಲಸ ಮಾಡುತ್ತಿದ್ದ ಆರೋಪಿ ನಂತರ ಮತ್ತೊಂದು ಮಳಿಗೆಯಲ್ಲಿ ಸ್ವಚ್ಛತಾ ಕೆಲಸಗಾರನಾಗಿ ದುಡಿಯುತ್ತಿದ್ದ. ಸುಲಭವಾಗಿ ಹಣ ಸಂಪಾದಿಸಲು ಕಳ್ಳತನಕ್ಕೆ ಇಳಿದಿದ್ದ.
ಮೊಬೈಲ್ ಅಂಗಡಿ ಮಾಲೀಕ ದಿನೇಶ್ ಎಂದಿನಂತೆ ಅಂಗಡಿ ವಹಿವಾಟು ಮುಗಿಸಿ ಬೀಗ ಹಾಕಿ ಮನೆಗೆ ತೆರಳಿದ್ದರು. ತಡರಾತ್ರಿ ಗೋಡೆ ಕೊರೆದು ಬೆತ್ತಲೆಯಾಗಿ ಒಳ ನುಗ್ಗಿದ ಹಸನ್ ಮುಖಚಹರೆ ಕಾಣಿಸಿದಂತೆ ಮಾಸ್ಕ್ ಹಾಕಿಕೊಂಡಿದ್ದ. ಲಕ್ಷಾಂತರ ರೂಪಾಯಿ ಮೌಲ್ಯದ 87 ಮೊಬೈಲ್ ಗಳನ್ನು ಕಳವು ಮಾಡಿದ್ದ. ಬಟ್ಟೆ ಗಲೀಜಾಗುತ್ತದೆ ಎಂಬ ಕಾರಣಕ್ಕೆ ಬೆತ್ತಲಾಗಿ ಬಂದು ಕಳವು ಮಾಡಿರುವುದಾಗಿ ಆರೋಪಿ ವಿಚಾರಣೆಯ ವೇಳೆ ತಿಳಿಸಿದ್ದಾನೆ ಎನ್ನಲಾಗಿದೆ.