ಬೆಂಗಳೂರು : ಬೆಂಗಳೂರಿನ ನಗರ್ತಪೇಟೆಯ ವಾಣಿಜ್ಯ ಕಟ್ಟಡದಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ ಒಂದೇ ಕುಟುಂಬದ ನಾಲ್ವರು ಸೇರಿ ಐವರು ಮೃತಪಟ್ಟಿದ್ದಾರೆ.
ಹೌದು. ಅಗ್ನಿಶಾಮಕ ದಳದ ಸಿಬ್ಬಂದಿ ಬೆಳಗ್ಗೆಯಿಂದ ಸತತ ಕಾರ್ಯಾಚರಣೆ ನಡೆಸಿ ಇಬ್ಬರ ಶವ ಹೊರಕ್ಕೆ ತೆಗೆದಿದೆ. ಮೂವರ ಶವ ಹೊರ ತೆಗೆಯಲು ಕಾರ್ಯಾಚರಣೆ ಮುಂದುವರೆಸಿದೆ.
ಮೃತರನ್ನು ಮದನ್ (38) ಪತ್ನಿ ಸಂಗೀತಾ (33) ಮಕ್ಕಳಾದ ಮಿತೇಶ್ (8) ವಿಹಾನ್ (5) ಎಂದು ಗುರುತಿಸಲಾಗಿದೆ. ಹಾಗೂ ಮತ್ತೊಂದು ಮಹಡಿಯಲ್ಲಿದ್ದ ಸುರೇಶ್ ಕೂಡ ಬೆಂಕಿಗೆ ಸಿಲುಕಿ ಸಜೀವ ದಹನರಾಗಿದ್ದಾರೆ. ಮೊದಲು ಕೆಳಮಹಡಿಯಲ್ಲಿ ಬೆಂಕಿ ಕಾಣಿಸಿಕೊಂಡಿತ್ತು, ನಂತರ ಅದು ಮೇಲಿನ ಮಹಡಿಗೆ ಕೂಡ ಆವರಿಸಿಕೊಂಡಿದೆ. ಬೆಂಕಿ ಹೊತ್ತಿಕೊಳ್ಳುತ್ತಿದ್ದಂತೆ ಎಲ್ಲರೂ ಓಡಿಹೋಗಿ ತಮ್ಮ ಜೀವ ಉಳಿಸಿಕೊಂಡಿದ್ದಾರೆ. ಆದರೆ ಒಂದು ಫ್ಯಾಮಿಲಿಗೆ ಮಾತ್ರ ಬೆಂಕಿಗೆ ಸಿಲುಕಿದೆ.
ಘಟನೆ ನಡೆದ ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ದೌಡಾಯಿಸಿ ಬೆಂಕಿ ನಂದಿಸುತ್ತಿದ್ದಾರೆ. ಅಗ್ನಿ ಅವಘಡದಿಂದ ಭಾರಿ ಪ್ರಮಾಣದ ವಸ್ತುಗಳು ಕೂಡ ಸುಟ್ಟು ಕರಕಲಾಗಿದೆ ಎಂದು ಹೇಳಲಾಗುತ್ತಿದೆ. ಹಲಸೂರು ಗೇಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಇಂದು ಬೆಳಗ್ಗೆ 3:30 ರ ವೇಳೆಗೆ ಈ ಅವಘಡ ಸಂಭವಿಸಿದೆ.