ಹೈದರಾಬಾದ್: ಖ್ಯಾತ ಸುದ್ದಿ ನಿರೂಪಕಿ, ತೆಲುಗು ನ್ಯೂಸ್ ಆಂಕರ್ ಶ್ವೇಚ್ಛಾ ವೋತಾರ್ಕರ್ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಹೈದರಾಬಾದ್ ನಲ್ಲಿ ನಡೆದಿದೆ.
ಹಲವು ವರ್ಷಗಳಿಂದ ತೆಲುಗು ಸುದ್ದಿ ಮಾಧ್ಯಮಗಳಲ್ಲಿ ಜನಪ್ರಿಯತೆ ಪಡೆದಿದ್ದ ಶ್ವೇಚ್ಛಾ, ಹೈದರಾಬಾದ್ ನ ತಮ್ಮ ಮನೆಯಲ್ಲಿಯೇ ಆತ್ಮಹತ್ಯೆಗೆ ಶರಣಾಗಿದ್ದಾರೆ. ಜವಾಹರ ನಗರದಲ್ಲಿರುವ ತಮ್ಮ ಮನೆಯಲ್ಲಿ ರೂಂ ನಲ್ಲಿ ಫ್ಯಾನ್ ಗೆ ನೇಣು ಬಿಗಿದುಕೊಂಡಿರುವ ರೀತಿಯಲ್ಲಿ ಶ್ವೇಚ್ಛಾ ಶವ ಪತ್ತೆಯಾಗಿದೆ.
ಮನೆಯ ಕೋಣೆಯಲ್ಲಿ ಲುಂಗಿಯಿಂದ ಫ್ಯಾನ್ ಗೆ ನೇಣುಬಿಗಿದುಕೊಂಡಿರುವ ರೀತಿಯಲ್ಲಿ ಅವರ ಮೃತದೇಹ ಪತ್ತೆಯಾಗಿದೆ. ಶ್ವೇಚ್ಛಾ ತನ್ನ ತಾಯಿ ಶ್ರೀದೇವಿಯೊಂದಿಗೆ ವಾಸವಾಗಿದ್ದರು ಎನ್ನಲಾಗಿದೆ.
ಶ್ವೇಚ್ಛಾ ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಆದರೆ ಸಾವಿಗೂ ಮುನ್ನ ಇನ್ ಸ್ಟಾಗ್ರಾಂ ನಲ್ಲಿ ಅವರು ಮಾಡಿರುವ ಪೋಸ್ಟ್ ಅನುಮಾನಕ್ಕೆ ಕಾರಣವಾಗಿದೆ. ಇನ್ ಸ್ಟಾಗ್ರಾಂ ನಲ್ಲಿ ಕೆಲ ಫೋಟೋಗಳನ್ನು ಹಂಚಿಕೊಂಡಿರುವ ಶ್ವೇಚ್ಛಾ, ಬುದ್ಧನ ಸಾಲುಗಳನ್ನು ಬರೆದುಕೊಂಡಿದ್ದಾರೆ. ಮನಸ್ಸು ಶಾಂತವಾಗಿದ್ದರೆ, ಆತ್ಮ ಮಾತನಾಡುತ್ತದೆ’ ಎಂದು ಮಾಡಿರುವ ಪೋಸ್ಟ್ ಸಾಕಷ್ಟು ಅನುಮಾನಕ್ಕೆ ಕಾರಣವಾಗಿದೆ.
ಸದ್ಯ ಶ್ವೇಚ್ಛಾ ಅವರ ಮೃತದೇಹವನ್ನು ಮರೋಣತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.