ಪುಣೆ: ವಿದ್ಯಾರ್ಥಿಯೋರ್ವ ರೈಲಿನಲ್ಲಿ ಹಿಂದಿಯಲ್ಲಿ ಮಾತನಾಡಿದ್ದಕ್ಕೆ ಜನರು ಆತನನ್ನು ಹಿಡಿದು ಥಳಿಸಿರುವ ಘಟನೆ ಮಹಾರಾಷ್ಟ್ರದ ಕಲ್ಯಾಣ್ ನಗರದಲ್ಲಿ ನಡೆದಿದೆ. ಇದರಿಂದ ಆಘಾತಕ್ಕೊಳಗಾದ ವಿದ್ಯಾರ್ಥಿ ದುಡುಕಿನ ನಿರ್ಧಾರ ಕೈಗೊಂಡಿದ್ದಾನೆ.
ಜನರು ತನ್ನನ್ನು ಥಳಿಸಿ ಅವಮಾನಿಸಿದ್ದಕ್ಕೆ ಮಾನಸಿಕವಾಗಿ ತೀವ್ರವಾಗಿ ನೊಂದ ವಿದ್ಯಾರ್ಥಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ. ಅರ್ನವ್ ಮುಲುಂದ್ ನ ಕೇಳ್ಕರ್ ಕಾಲೇಜಿನಲ್ಲಿ ಪ್ರಥಮ ಪಿಯು ಓದುತ್ತಿದ್ದ. ಎಂದಿನಂತೆ ಬೆಳಿಗ್ಗೆ ಅಂಬರ್ನಾಥ್-ಕಲ್ಯಾಣ್ ಸ್ಥಳೀಯ ರೈಲಿನಲ್ಲಿ ಕಾಲೇಜಿಗೆ ಹೋಗುತ್ತಿದ್ದ. ಈ ವೇಳೆ ಕೆಲ ಪ್ರಯಾಣಿಕರ ಜೊತೆ ಸಣ್ಣ ಜಗಳವಾಗಿದೆ.
ಗಲಾಟೆ ವೇಳೆ ವಿದ್ಯಾರ್ಥಿ ಹಿಂದಿಯಲ್ಲಿ ಮಾತನಾಡುತ್ತಿದ್ದ ಎಂಬ ಕಾರಣಕ್ಕೆ ೪-೫ ಜನರು ಆತನನ್ನು ಹಿಡಿದು ಥಳಿಸಿದ್ದಾರೆ. ಮರಾಥಿ ಮಾತನಾಡಲು ಒತ್ತಾಯಿಸಿದ್ದಾರೆ. ಇದರಿಂದ ಭಯಗೊಂಡ ಅರ್ನವ್, ನಿಲ್ದಾಣದಲ್ಲಿ ಇಳಿದು ತನ್ನ ತಂದೆಗೆ ಕರೆ ಮಾಡಿ ವಿಷಯ ಹೇಳಿ ಬೇಸರ ಮಾಡಿಕೊಂಡಿದ್ದ. ತಂದೆ ಜಿತೇಂದ್ರ ಖೈರೆ ಸಾಮಾಧಾನಪಡಿಸಿದರೂ ಆತನ ಮನಸ್ಸು ಹುಗುರಾಗಿಲ್ಲ. ಇದೇ ನೋವಿನಲ್ಲಿಯೇ ಮನೆಗೆ ಬಂದಿದ್ದ ವಿದ್ಯಾರ್ಥಿ ಬಾಗಿಲು ಹಾಕಿಕೊಂಡು ಮನೆಯಲ್ಲಿ ನೇಣಿಗೆ ಶರಣಾಗಿದ್ದಾನೆ.
ಸಂಜೆ ತಂದೆ ಕೆಲಸದಿಂದ ಮನೆಗೆ ವಾಪಾಸ್ ಆದಗ ಮನೆಯ ಬಾಗಿಲು ಒಳಗಿನಿಂದ ಲಾಕ್ ಆಗಿತ್ತು. ಆತಂಕದಿಂದ ತಂದೆ ಬಾಗಿಲು ಒಡೆದು ನೋಡಿದಾಗ ಅರ್ನವ್ ದುಪ್ಪಟ್ಟಾದಿಂದ ನೇಣು ಬಿಗಿದುಕೊಂಡಿದ್ದ. ತಕ್ಷಣ ಆತನನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಿಸದೇ ತಡರಾತ್ರಿ ವಿದ್ಯಾರ್ಥಿ ಕೊನೆಯುಸಿರೆಳೆದಿದ್ದಾನೆ.
