ರಾಯಚೂರು: ರಾಜ್ಯದ ಹಲವು ಜಿಲ್ಲೆಗಳಲ್ಲಿ ಬೀದಿನಾಯಿಗಳ ಹಾವಳಿ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಅದರಲ್ಲೂ ರಾಯಚೂರಿನಲ್ಲಿ ಬೀದಿನಾಯಿಗಳು 15 ಜನರ ಮೇಲೆ ದಾಳಿ ನಡೆಸಿದ್ದು 8 ಜನರ ಸ್ಥಿತಿ ಗಂಭೀರವಾಗಿದೆ.
ರಾಯಚೂರು ನಗರದ ಗಂಗಾನಿವಾಸ ಹಾಗೂ ಟ್ಯಾಂಕ್ ಬಂಡ್ ಸುತ್ತಮುತ್ತ ಪ್ರದೇಶದಲ್ಲಿ ಬೀದಿನಾಯಿಗಳು ದಾಳಿ ನಡೆಸಿದ್ದು, ಓರ್ವ ಬಾಲಕ ಸೇರಿ 8 ಜನರ ಸ್ಥಿತಿ ಗಂಭೀರವಗೈವೆ. ಸಿಕ್ಕ ಸಿಕ್ಕವರ ಮೇಲೆ ಬೀದಿನಾಯಿಗಳು ದಾಳಿ ನಡೆಸುತ್ತಿರುವ ಹಿನ್ನೆಲೆಯಲ್ಲಿ ಹುಚ್ಚುನಾಯಿ ಇರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಜನರು ಆತಂಕಗೊಂಡಿದ್ದಾರೆ.
ಬಾಲಕ ಸೇರಿದಂತೆ ಎಂಟು ಜನರ ಮುಖ, ಕೈ-ಕಾಲು, ಮೈ ಮೇಲೆ ನಾಯಿ ದಾಳಿ ನಡೆಸಿ ಕಚ್ಚಿ ಗಾಯಗೊಳಿಸಿದೆ. ಲಿಂಗಪ್ಪ, ಶರಣಪ್ಪ, ರಮೇಶ್, ಮೊಹಮ್ಮದ್ ಗೌಸ್ ಸೇರಿದಂತೆ ಒಟ್ಟು 15ಜನರ ಮೇಲೆ ದಾಳಿ ನಡೆಸಿದ್ದು, ಅವರಲ್ಲಿ ಗಂಭೀರವಾಗಿ ಗಾಯಗೊಂಡಿರುವ ೮ ಜನರನ್ನು ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ರಾಯಚೂರಿನಲ್ಲಿ ಪದೇ ಪದೇ ಬೀದಿನಾಯಿಗಳು ದಾಳಿ ನಡೆಸುತ್ತಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಯಾವುದೇ ಕ್ರಮಕ್ಕೆ ಮುಂದಾಗಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.