ಹೈದರಾಬಾದ್: ಆಂಧ್ರಪ್ರದೇಶದ ಪ್ರಸಿದ್ಧ ದೇವಾಲಯ ಶ್ರೀಶೈಲಂ ದೇವಸ್ಥಾನದ ಪ್ರಸಾದದಲ್ಲಿ ಜಿರಳೆ ಪತ್ತೆಯಾಗಿರುವ ಘಟನೆ ನಡೆದಿದೆ.
ಶ್ರೀಶೈಲಂ ದೇವಸ್ಥಾನದಲ್ಲಿ ಭಕ್ತರೊಬ್ಬರು ಪಡೆದಿದ್ದ ಲಡ್ಡು ಪ್ರಸಾದದಲ್ಲಿ ಜಿರಳೆ ಪತ್ತೆಯಾಗಿದೆ ಎಂದು ಆರೋಪಿಸಲಾಗಿದೆ. ಶರಶ್ಚಂದ್ರ.ಕೆ ಎಂಬುವವರು ಪಡೆದಿದ್ದ ಲಡ್ಡು ಪ್ರಸಾದದ ಮಧ್ಯದಲ್ಲಿ ಜಿರಳೆ ತೋರಿಸುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಪ್ರಸಾದದಲ್ಲಿ ಜಿರಳೆ ಪತ್ತೆ ಹಿನ್ನೆಲೆಯಲ್ಲಿ ಶರಶ್ಚಂದ್ರ ಅವರು ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ದೂರು ನೀಡಿದ್ದಾರೆ. ಸಿಬ್ಬಂದಿಗಳು ಸ್ವಚ್ಛತೆ ಬಗ್ಗೆ ಗಮನಹರಿಸದೇ ನಿರ್ಲಕ್ಷ್ಯವಹಿಸಿ ಲಡ್ಡು ತಯಾರಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಆದರೆ ದೇವಸ್ಥಾನದ ಆಡಳಿತಮಂಡಳಿ ಶರಶ್ಚಂದ್ರ ಅವರ ಹೇಳಿಕೆಯನ್ನು ನಿರಾಕರಿಸಿದೆ.
ಇನ್ನು ದೇವಸ್ಥಾನದ ಕಾರ್ಯನಿರ್ವಹಣಾ ಅಧಿಕಾರಿ ಶ್ರೀನಿವಾಸ ರಾವ್, ದೇವಸ್ಥಾನದಲ್ಲಿ ಶ್ವಚ್ಚತೆ ಮತ್ತು ನೈರ್ಮಲ್ಯ ಕಾಪಾಡಿಕೊಂಡೇ ಲಡ್ಡು ತಯಾರಿಸಲಾಗುತ್ತಿದೆ. ಲಡ್ಡುವಿನಲ್ಲಿ ಜಿರಳೆ ಸಿಗಲು ಸಾಧ್ಯವಿಲ್ಲ. ಭಕ್ತರು ಚಿಂತಿಸಬೇಡಿ ಎಂದು ಮನವಿ ಮಾಡಿದ್ದಾರೆ.