ಆಂಧ್ರಪ್ರದೇಶದಲ್ಲಿ ಆಘಾತಕಾರಿ ಘಟನೆ ನಡೆದಿದ್ದು, ಮೂವರು ಮಕ್ಕಳಿಗೆ ಬೆಂಕಿ ಹಚ್ಚಿ ಕೊಂದು ತಂದೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. 36 ವರ್ಷದ ವ್ಯಕ್ತಿಯೊಬ್ಬ ತನ್ನ ಮೂವರು ಮಕ್ಕಳನ್ನು ಕೊಂದು, ಅವರ ದೇಹಗಳಿಗೆ ಬೆಂಕಿ ಹಚ್ಚಿ, ನಂತರ ಆತ್ಮಹತ್ಯೆ ಮಾಡಿಕೊಂಡಿದ್ದಾನೆ .
ವೈವಾಹಿಕ ಕಲಹದಿಂದ ಈ ಘಟನೆ ನಡೆದಿದೆ ಎಂದು ಪೊಲೀಸರು ಶಂಕಿಸಿದ್ದಾರೆ. ತೆಲಂಗಾಣದ ನಾಗರ್ಕರ್ನೂಲ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ.
ಪ್ರಕಾಶಂ ಜಿಲ್ಲೆಯ ಪೆದ್ದಬೋಯಪಲ್ಲಿ ಗ್ರಾಮದ ರಸಗೊಬ್ಬರ ಅಂಗಡಿ ಮಾಲೀಕ ಗುಟ್ಟ ವೆಂಕಟೇಶ್ವರಲು ಎಂದು ಗುರುತಿಸಲಾದ ಆರೋಪಿ ಆಗಸ್ಟ್ 30 ರಂದು ತನ್ನ ಪತ್ನಿ ದೀಪಿಕಾ ಜೊತೆ ಜಗಳವಾಡಿದ್ದ ಎಂದು ವರದಿಯಾಗಿದೆ.
ಪೊಲೀಸರ ಪ್ರಕಾರ, ಅದೇ ರಾತ್ರಿ ವೆಂಕಟೇಶ್ವರಲು ತನ್ನ ಇಬ್ಬರು ಕಿರಿಯ ಮಕ್ಕಳಾದ ವರ್ಷಿಣಿ ಮತ್ತು ಶಿವಧರ್ಮ ಅವರನ್ನು ಉಪ್ಪನುತಲ ಮಂಡಲದ ಸೂರ್ಯತಾಂಡ ಬಳಿ ಬೆಂಕಿ ಹಚ್ಚಿದ್ದಾನೆ ಎಂದು ಆರೋಪಿಸಲಾಗಿದೆ. ನಂತರ ತೆಲಂಗಾಣದ ಅಚಂಪೇಟ್ ಬಳಿಯ ತಂದ್ರಾದಲ್ಲಿ ತನ್ನ ಹಿರಿಯ ಮಗಳು ಮೋಕ್ಷಿತಾಳನ್ನು ಕೊಂದಿದ್ದಾನೆ. ಕೊಲೆ ಬಳಿಕ ಅಚಂಪೇಟ್ನಲ್ಲಿ ಖರೀದಿಸಿದ್ದ ಕೀಟನಾಶಕವನ್ನು ಸೇವಿಸಿ ಸೂಸೈಡ್ ಮಾಡಿಕೊಂಡಿದ್ದಾನೆ. ಅವನ ಶವ ವೆಲ್ದಂಡ ಮಂಡಲದ ಬುರಕುಂಟಾದಲ್ಲಿ ಪತ್ತೆಯಾಗಿದೆ.
ಹೈದರಾಬಾದ್-ಶ್ರೀಶೈಲಂ ಹೆದ್ದಾರಿಯಲ್ಲಿ ದ್ವಿಚಕ್ರ ವಾಹನದಲ್ಲಿ ಆ ವ್ಯಕ್ತಿ ತನ್ನ ಮಕ್ಕಳೊಂದಿಗೆ ಪ್ರಯಾಣಿಸುತ್ತಿರುವುದನ್ನು ಸಿಸಿಟಿವಿಯಲ್ಲಿ ಸೆರೆಯಾಗಿದೆ. ವೆಂಕಟೇಶ್ವರಲು ಅವರ ಸಹೋದರ ಮಲ್ಲಿಕಾರ್ಜುನ ರಾವ್ ನೀಡಿದ ದೂರಿನ ಮೇರೆಗೆ ವೆಲ್ದಂಡ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಸಾವಿಗೆ ನಿಖರವಾದ ಕಾರಣಗಳನ್ನು ಪತ್ತೆ ಹಚ್ಚಲು ಹೆಚ್ಚಿನ ತನಿಖೆ, ಶವಪರೀಕ್ಷೆ ಮತ್ತು ವಿಧಿವಿಜ್ಞಾನ ವಿಶ್ಲೇಷಣೆ ನಡೆಯುತ್ತಿದೆ.