ಬೆಂಗಳೂರು: ಕಾರಿನ ಮೇಲೆ ಮಳೆ ನೀರು ಹಾರಿದ್ದಕ್ಕೆ ವ್ಯಕ್ತಿಯೊಬ್ಬ, ಕಾರು ಚಾಲಕನ ಮುಖಕ್ಕೆ ಗುದ್ದಿ, ಕೈ ಬೆರಳು ಕಚ್ಚಿ ವಿಕೃತಿ ಮೆರೆದಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಜಯಂತ್ ಹಲ್ಲೆಗೊಳಗಾದ ಕಾರು ಚಾಲಕ. ಬೆಂಗಳೂರಿನ ಓಕುಳಿಪುರಂ ಅಂಡರ್ ಪಾಸ್ ನಲ್ಲಿ ಮೇ 25ರಂದು ಮಳೆ ನೀರು ನಿಂತು ಅವಾಂತರ ಸೃಷ್ಟಿಯಾಗಿತ್ತು. ಜಯಂತ್ ದಂಪತಿ ಮೆಜೆಸ್ಟಿಕ್ ನಿಂದ ಲುಲು ಮಾಲ್ ಕಡೆಗೆ ಕಾರಿನಲ್ಲಿ ತೆರಳುತ್ತಿದ್ದರು. ಈ ವೇಳೆ ರಸ್ತೆಯಲ್ಲಿ ನಿಂತಿದ್ದ ಮಳೆ ನೀರು ಪಕ್ಕದ ಕಾರಿಗೆ ಸಿಡಿದಿದೆ. ಇಷ್ಟಕ್ಕೆ ಕೋಪಗೊಂಡ ಪಕ್ಕದ ಕಾರಿನ ಮಾಲೀಕ ಜಯಂತ್ ಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿ ಗಲಾಟೆ ಮಾಡಿದ್ದಾರೆ. ಜಯಂತ್ ಗೊತ್ತಾಗಿಲ್ಲ ಎಂದು ಕ್ಷಮೆ ಕೇಳಿದ್ದಾರೆ.
ಅಷ್ಟಾದರೂ ಸಮಾಧಾನಗೊಳ್ಳದ ಕಾರು ಮಾಲೀಕ ಜಯಂತ್ ಕಾರನ್ನು ಹಿಂಬಾಲಿಸಿಕೊಂಡು ಹೋಗಿ ಕಾರು ಅಡ್ದಗಟ್ಟಿ ನಿಲ್ಲಿಸಿದ್ದಾರೆ. ತನ್ನ ಕಾರಿನಿಂದ ಕೆಳಗಿಳಿದು ಜಯಂತ್ ಅವರನ್ನು ಅವರ ಕಾರಿನಿಂದ ಹೊರಗೆಳೆದು ಹಲ್ಲೆ ನಡೆಸಿದ್ದಾರೆ. ಅಲ್ಲದೇ ಮುಖಕ್ಕೆ ಗುದ್ದಿ, ಅವರ ಕೈಬೆರಳನ್ನು ಕಚ್ಚಿ ವಿಕೃತಿ ಮೆರೆದಿದ್ದಾನೆ. ಜಯಂತ್ ಅವರ ಬಲಗೈ ಬೆರಳಿಗೆ ಗಂಭೀರವಾದ ಗಾಯಗಳಾಗಿದ್ದು, ವೈದ್ಯರು 5 ಸ್ಟಿಚ್ ಹಾಕಿದ್ದಾರೆ.
ಘಟನೆ ಸಂಬಂಧ ಮಾಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.