ಬೆಂಗಳೂರು: ಬಿಜೆಪಿಯ ಹಲವು ಶಾಸಕರು ನನಗೆ ಆಮಿಷವೊಡ್ಡಿದ್ದಾರೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೊಸ ಬಾಂಬ್ ಸಿಡಿಸಿದ್ದಾರೆ.
ಸಿಎಂ ಸಿದ್ದರಾಮಯ್ಯ ಸರ್ಕಾರ ಅನುದಾನ ಬಿಡುಗಡೆ ವಿಚಾರದಲ್ಲಿ ತಾರತಮ್ಯ ಮಾಡುತ್ತಿದೆ ಎಂಬ ಬಿಜೆಪಿ ನಾಯಕರ ಆರೋಪಕ್ಕೆ ಬೆಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿರುವ ಸಚಿವ ಪ್ರಿಯಾಂಕ್ ಖರ್ಗೆ, ಬಿಜೆಪಿ ಸರ್ಕಾರದ ಅವಧಿಯಲ್ಲಿ ನಮ್ಮ ಕ್ಷೇತ್ರಕ್ಕೆ 280 ಕೋಟಿ ಯೋಜನೆಗಳನ್ನು ತಡೆಹಿಡಿದು, ಸ್ಥಗಿತಗೊಳಿಸಿದ್ದರು. ಅನುದಾನಕ್ಕಾಗಿ ಎಷ್ಟೇ ಹೇಳಿದರೂ ಸ್ಪಂದಿಸಿರಲಿಲ್ಲ. ಆಗ ನಾವು ಇವರಂತೆ ನಡೆದುಕೊಂಡೆವಾ? ನಮಗೂ ಸಂದರ್ಭಬರುತ್ತದೆ ಎಂದು ಸುಮ್ಮನಾದೆವು. ಬಿಜೆಪಿಯ ಶಾಸಕರೇ ನಮಗೆ ಆಮಿಷವೊಡ್ಡಿದ್ದರು.
ನಾವು ವಿಪಕ್ಷದಲ್ಲಿ ಇದ್ದಾಗ ಬಿಜೆಪಿಯ ಹಲವಿ ಶಾಸಕರು ಬಂದು ನಮಗೆ ಆಮಿಷವೊಡ್ಡಿದ್ದರು. ಬಿಟ್ ಕಾಯಿನ್ ಹಗರಣ, ಪಿಎಸ್ ಐ, ಕೆಕೆ ಆರ್ ಡಿಬಿ ಅವ್ಯವಹಾರಗಳನ್ನು ಬಯಲು ಮಾಡಬೇಡಿ. ನಾವು ನಿಮಗೆ ಡಬಲ್ ಅನುದಾನ ಕೊಡಿಸುತ್ತೇವೆ ಎಂದು ಬಿಜೆಪಿಯ ಶಾಸಕರೇ ನನಗೆ ಸದನದಲ್ಲೇ ಬಂದು ಮನವಿ ಮಾಡಿದ್ದರು.ಆಮಿಷವೊಡ್ದಿದ್ದರು. ಅವರೆಲ್ಲ ಯಾರ್ಯಾರು ಎಂದು ನಾನು ಹೇಳಲಾ? ನಾವು ಅವರ ಬಗ್ಗೆ ಮಾತನಾಡಬಹುದು. ರೂಲಿಂಗ್ ಪಾರ್ಟಿ ಎಂಎಲ್ ಎ ಯಾರಿರುತ್ತಾರೆ ಅವರಿಗೆ ಸ್ವಲ್ಪ ಜಾಸ್ತಿ ಅನುದಾನ ಸಿಗುತ್ತೆ. ಅದು ಸಹಜ. ಹಾಗಂತ ನಾವು ಯಾರಿಗೂ ಅನುದಾನ ಬಿಡುಗಡೆಯಲ್ಲಿ ವಿಳಂಬ ಮಾಡಿಲ್ಲ. ಪ್ರಗತಿಪಥ, ಕಲ್ಯಾಣ ಪಥದಲ್ಲಿ ಎಲ್ಲರಿಗೂ ಅನುದಾನ ಕೊಟ್ಟಿದ್ದೇವೆ. ಜೆಜೆಎಂ ಯೋಜನೆಯಡಿ ಇವರು ಕೇಂದ್ರದಿಂದ ಸೆಂಕ್ಷನ್ ಮಾಡಿಕೊಂಡು ತರುತ್ತಿದ್ದಾರೆ ಅದು ಕಾಂಗ್ರೆಸ್ ನಾಯಕರಿಗೆ ಅಥವಾ ಕಾಂಗ್ರೆಸ್ ಶಾಸಕರ ಕ್ಷೇತ್ರಕ್ಕೆ ಹೋಗ್ತಿದೆಯಾ? ಎತ್ತಿನ ಹೊಳೆ ಪ್ರಾಜೆಕ್ಟ್ ವಿಚಾರದಲ್ಲೂ ಹಾಗೆ… ಸುಮ್ಮನೆ ಬಿಜೆಪಿಯವರು ಟೀಕೆ ಮಾಡುವುದದಲ್ಲಿ ಅರ್ಥವಿಲ್ಲ. ಕೇಂದ್ರದಲ್ಲಿ ನಿಮದೇ ಸರ್ಕಾರವಿದೆ ನಮಗೂ ಸಹಕಾರ ನೀಡಲು ಹೇಳಿ. ಭದ್ರಾ ಸೇರಿದಂತೆ ಹಲವು ನೀರಾವರಿ ಯೋಜನೆಗಳಿಗೆ ಅನುದಾನ ಕೊಡಿಸಿ ಎಂದು ತಿರುಗೇಟು ನೀಡಿದರು.