ಬೆಂಗಳೂರು: ಬಿಜೆಪಿ ನಾಯಕರು ತಮ್ಮ ಮಕ್ಕಳಿಗೆ ಕೇಸರಿ ಶಾಲು ಹೊಡಿಸಿ, ಗೋರಕ್ಷಣೆಗೆ, ಧರ್ಮರಕ್ಷಣೆಗೆ ಕಳುಹಿಸುತ್ತಾರಾ? ಎಂದು ಸಚಿವ ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ತಲೆ ತೆಗೆಯಿರಿ, ತೊಡೆ ಮುರಿಯಿರಿ ಎಂದು ಹೇಳಿಕೆ ನೀಡುತ್ತಿರುವ ಬಿಜೆಪಿ ನಾಯಕರು, ಮೊದಲು ತಮ್ಮ ಮಕ್ಕಳ ಕೈಗೆ ದೊಣ್ಣೆ, ಲಾಂಘು, ಮಚ್ಚುಗಳನ್ನು ಕೊಟ್ಟು ಬೀದಿಗೆ ಬಿಡುತ್ತಾರೆಯೇ? ಪ್ರಚೋದನಕಾರಿ ಭಾಷಣ ಮಾಡಿ ಬಡವರ ಮಕ್ಕಳನ್ನು ಬಾವಿಗೆ ತಳ್ಲಿ ರಾಜಕೀಯದ ಆಳ ನೋಡುವ ಬದಲು ತಮ್ಮ ಮಕ್ಕಳಿಗೆ ಹಾಗೆ ಮಾಡಲಿ. ತಮ್ಮ ಮಕ್ಕಳ ಹೆಗಲಿಗೆ ಕೇಸರಿ ಶಾಲು, ಕೈಗೆ ದೊಣ್ಣೆ ಕೊಟ್ಟು ಧರ್ಮರಕ್ಷಣೆಯ ಕೈಂಕರ್ಯಕ್ಕೆ ಬಿಡಲಿ ಎಂದಿದ್ದಾರೆ.
ಧರ್ಮರಕ್ಷಣೆಯ ಬೋಧನೆ ಮಾಡುವ ಬಿಜೆಪಿಯವರು, ಪ್ರಚೋದನೆಯನ್ನು ತಮ್ಮ ಮನೆಯಿಂದಲೇ ಶುರು ಮಾಡಲಿ, ತಮ್ಮ ಮಕ್ಕಳಿಗೆ ತ್ರಿಶೂಲ ದೀಕ್ಷೆ ಕೊಡಲಿ, ಕೈಗೆ ದೊಣ್ಣೆ ಕೊಡಲಿ ಎಂದು ಕಿಡಿಕಾರಿದ್ದಾರೆ.
ಹಿಂದೂಗಳು ಹೆಚ್ಚು ಮಕ್ಕಳನ್ನು ಹಡೆಯಬೇಕು ಎಂಬ ಆರ್.ಎಸ್.ಎಸ್ ಫರ್ಮಾನು ನ್ನು ಯಾವ ಬಿಜೆಪಿಗರು ಪಾಲನೆ ಮಾಡಲು ಮುಂದಾಗಿದ್ದಾರೆ? ಮಕ್ಕಳನ್ನು ಹೇರುವ ಹೊರೆಯೂ ಬಡವರಿಗೆ ಮಾತ್ರವೇ? ಅಥವಾ ಬಿಜೆಪಿಯವರಿಗೂ ಅನ್ವಯಿಸುತ್ತದೆಯೇ? ಎಂದು ಪ್ರಶ್ನಿಸಿದ್ದಾರೆ.
ಅಮಾಯಕ ಹಿಂದೂ ಕಾರ್ಯಕರ್ತರು, ಮೊದಲು ಬಿಜೆಪಿ ನಾಯಕರಿಗೆ ತಲೆ ತೆಗೆಯುವ ಕೆಲಸಕ್ಕೆ ನಿಮ್ಮ ಮಕ್ಕಳು ಮುಂದಿರಲಿ, ನಾವು ಅವರ ಹಿಂದೆ ಇರುತ್ತೇವೆ ಎಂಬ ಒಂದೇ ಒಂದು ಬೇಡಿಕೆ ಮುಂಡಿಡಬೇಕು. ಆಗ ಬಿಜೆಪಿ ನಾಯಕರ ಅಸಲಿ ಬಂಡವಾಳ ಏನು ಗೊತ್ತಾಗುತ್ತದೆ ಎಂದು ಟಾಂಗ್ ನೀಡಿದ್ದಾರೆ.