ಉಡುಪಿ: ಪರ್ಯಾಯ ಪುತ್ತಿಗೆ ಮಠದ ವತಿಯಿಂದ ಶುಕ್ರವಾರ ನಡೆಯುವ ಲಕ್ಷ ಕಂಠ ಗೀತ ಪಠಣ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಪ್ರಧಾನಿ ನರೇಂದ್ರ ಮೋದಿ ಉಡುಪಿಗೆ ಆಗಮಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಎಲ್ಲೆಡೆ ಬಿಗಿ ಭದ್ರತೆ ಕೈಗೊಳ್ಳಲಾಗಿದೆ.
ಮೋದಿಯವರ ಆಗಮನಕ್ಕಾಗಿಯೇ ಆದಿ ಉಡುಪಿ ಮೈದಾನದಲ್ಲಿ ಹೆಚ್ಚುವರಿ ಹೆಲಿಪ್ಯಾಡ್ ಗಳನ್ನು ನಿರ್ಮಾಣ ಮಾಡಲಾಗಿದೆ. ಬುಧವಾರ ದೆಹಲಿಯಿಂದ ಆಗಮಿಸಿದ ವಾಯುಸೇನೆ ಅಧಿಕಾರಿಗಳು ಗುಣಮಟ್ಟ ಪರೀಕ್ಷಿಸಿದ್ದಾರೆ. ನಂತರ ವಾಯು ಸೇನೆಯ ಮೂರು ಹೆಲಿಕಾಪ್ಟರ್ ಗಳು ಬಂದು ಉಡುಪಿ ಆಕಾಶದಲ್ಲಿ ಅನೇಕ ಬಾರಿ ಸುತ್ತು ಹೊಡೆದು ಹೆಲಿಪ್ಯಾಡ್ ಇಳಿಯುವ ಮತ್ತು ಟೆಕ್ ಆಫ್ ಮಾಡುವ ರಿಹರ್ಸಲ್ ನಡೆಸಿವೆ. ಯಾವುದೇ ತಾಂತ್ರಿಕ ಸಮಸ್ಯೆ ಇಲ್ಲದಿರುವುದನ್ನು ಅಧಿಕಾರಿಗಳು ಖಚಿತಪಡಿಸಿಕೊಂಡಿದ್ದಾರೆ.
ಪ್ರಧಾನಿ ಮೋದಿ ಸಾಗುವ ಆದಿ ಉಡುಪಿಯಿಂದ ಕೃಷ್ಣ ಮಠದವರೆಗಿನ ರಸ್ತೆ ಮತ್ತು ರೋಡ್ ಶೋ ನಡೆಸುವ ರಸ್ತೆಯಲ್ಲಿ ಗುರುವಾರ ರಿಹರ್ಸಲ್ ನಡೆಯಲಿದೆ.
ಶುಕ್ರವಾರ ಬೆಳಗ್ಗೆ 8 ಗಂಟೆಯಿಂದ ಮಧ್ಯಾಹ್ನ 3 ಗಂಟೆಯವರೆಗೆ ಭಕ್ತರಿಗೆ ಕೃಷ್ಣಮಠ ಮತ್ತು ರಥ ಬೀದಿಗೆ ಪ್ರವೇಶ ನಿರ್ಬಂಧಿಸಲಾಗಿದೆ. ಹೊರ ಜಿಲ್ಲೆಗಳಿಂದಲೂ ಹೆಚ್ಚಿನ ಪೊಲೀಸರನ್ನು ಕರೆಸಲಾಗಿದ್ದು, ಎಲ್ಲೆಡೆ ಭದ್ರತೆ ಕೈಗೊಳ್ಳಲಾಗಿದೆ. ಪ್ರಧಾನಿಯವರ ಸ್ವಾಗತಕ್ಕೆ ಕಟೌಟ್ ಗಳು, ಫ್ಲೆಕ್ಸ್ ಗಳನ್ನು ಅಳವಡಿಸಲಾಗಿದ್ದು, ಉಡುಪಿ ನಗರ ಕೇಸರಿಮಯವಾಗಿದೆ. ಪ್ರಧಾನಿ ಮೋದಿ ಅವರು ಶ್ರೀ ಕೃಷ್ಣನ ದರ್ಶನ ಪಡೆದು ಲಕ್ಷ ಕಂಠ ಗೀತ ಪಠಣ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
