ಉತ್ತರ ಕನ್ನಡ : ತಂದೆ ಜೊತೆ ದನದ ಕೊಟ್ಟಿಗೆಗೆ ಹೋಗಿದ್ದ 2 ವರ್ಷದ ಮಗು ಸಾವನ್ನಪ್ಪಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಹಳವಳ್ಳಿಯಲ್ಲಿ ನಡೆದಿದೆ. ಮೃತ ಬಾಲಕಿಯನ್ನ ಶ್ರೀಕಾಂತ್ ಎಂಬುವವರ ಪುತ್ರಿ ಸಾನ್ವಿ (2) ಎಂದು ಗುರುತಿಸಲಾಗಿದೆ.
ಘಟನೆ ಹಿನ್ನೆಲೆ
ಅಪ್ಪನ ಜೊತೆ ಸಾನ್ವಿ ದನದ ಕೊಟ್ಟಿಗೆ ಹೋಗಿದೆ. ತಂದೆ ಶ್ರೀಕಾಂತ್ ಕೊಟ್ಟಿಗೆ ಕೆಲಸದಲ್ಲಿ ಬ್ಯುಸಿಯಾಗಿದ್ದರು. ಮಗಳ ಬಗ್ಗೆ ಗಮನ ಹರಿಸಲಿಲ್ಲ. ಆದರೆ ಕೊನೆಗೆ ಮಗಳು ಎಲ್ಲಿ ಅಂತ ನೋಡುವಾಗ ಆಕೆ ಗೊಬ್ಬರದ ಗುಂಡಿಯಲ್ಲಿ ಬಿದ್ದಿದ್ದಾಳೆ. ಕೂಡಲೇ ಮಗುವನ್ನು ಆಸ್ಪತ್ರೆಗೆ ಸಾಗಿಸುವ ಪ್ರಯತ್ನ ಮಾಡಿದರೂ ಕೂಡ ಅಷ್ಟರಲ್ಲಿ ಬಾಲಕಿ ಮೃತಪಟ್ಟಿದ್ದಳು. ಮಳೆಗಾಲವಾದ್ದರಿಂದ ತೆರೆದ ಗೊಬ್ಬರ ಗುಂಡಿಯಲ್ಲಿ ನೀರು ತುಂಬಿತ್ತು, ಆದ್ದರಿಂದ ಈ ದುರ್ಘಟನೆ ಸಂಭವಿಸಿದೆ.
ಮಗಳನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮನೆಯಲ್ಲಿ ಚಿಕ್ಕಮಕ್ಕಳಿರುವ ಪೋಷಕರು ಮಕ್ಕಳ ಮೇಲೆ ಗಮನ ಇಡಬೇಕು. ಇಲ್ಲವಾದಲ್ಲಿ ಇಂತಹ ದುರಂತ ನಡೆಯುತ್ತದೆ.