ಬೆಂಗಳೂರು: ವೃದ್ಧಾಶ್ರಮಕ್ಕೆ ಸೇರಿಸಿದ್ದಕ್ಕೆ ಮನನೊಂದು ವೃದ್ಧ ದಂಪತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೃಷ್ಣಮೂರ್ತಿ(81), ರಾಧಾ(74) ಆತ್ಮಹತ್ಯೆ ಮಾಡಿಕೊಂಡವರು ಎಂದು ಹೇಳಲಾಗಿದೆ.
ಬೆಂಗಳೂರಿನ ಜೆಪಿ ನಗರದ ವೃದ್ಧಾಶ್ರಮದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಜೆಪಿ ನಗರದ ಎಂಟನೇ ಹಂತದ ಕಮಲಮ್ಮ ರಾಮಕೃಷ್ಣಪ್ಪ ವೃದ್ಧಾಶ್ರಮದಲ್ಲಿ ಘಟನೆ ನಡೆದಿದೆ. ಸೊಸೆಯ ಜೊತೆಗೆ ಹೊಂದಾಣಿಕೆ ಇಲ್ಲದ ಕಾರಣಕ್ಕೆ ದಂಪತಿ ವೃದ್ಧಾಶ್ರಮಕ್ಕೆ ಸೇರಿದ್ದರು.
ಮಗನಿಗೆ ಬೇರೆ ಮನೆ ಮಾಡಿಕೊಡಲು ತಂದೆ -ತಾಯಿ ಕೇಳಿದ್ದರು. 2021 ರಲ್ಲಿ ಬ್ಯಾಟರಾಯನಪುರದ ವೃದ್ಧಾಶ್ರಮಕ್ಕೆ ಸೇರಿಸಿದ್ದು, 2023ರಲ್ಲಿ ವಾಪಸ್ ಮನೆಗೆ ಕರೆದುಕೊಂಡು ಬರಲಾಗಿತ್ತು. ಆದರೆ ಮನೆಯಲ್ಲಿ ಮತ್ತೆ ಹೊಂದಾಣಿಕೆಯಾಗಿರಲಿಲ್ಲ. ಹೀಗಾಗಿ ಕಳೆದ ತಿಂಗಳು ಮತ್ತೆ ವೃದ್ಧಾಶ್ರಮಕ್ಕೆ ಸೇರಿಸಿದ್ದರು.
ಮೊನ್ನೆ ರಾತ್ರಿ ಊಟ ಮಾಡಿ ಮಲಗಲು ಹೋಗಿದ್ದ ದಂಪತಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಟಿವಿ ನೋಡುವ ವಿಚಾರಕ್ಕೆ ಇಬ್ಬರ ನಡುವೆ ಮನಸ್ತಾಪ ಆಗಿತ್ತು ಎಂದು ವೃದ್ಧಾಶ್ರಮದವರು ಮಾಹಿತಿ ನೀಡಿದ್ದಾರೆ. ತಲಘಟ್ಟಪುರ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ ಎನ್ನಲಾಗಿದ್ದು, ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.