ನವದೆಹಲಿ: ಶೀತ ಹಾಗೂ ಕೆಮ್ಮಿಗೆ ನೀಡಿದ್ದ ಸಿರಪ್ ನಿಂದಾಗಿ 11 ಮಕ್ಕಳು ಸಾವನ್ನಪ್ಪಿರುವ ಘಟನೆ ಬೆನ್ನಲ್ಲೇ ಕೇಂದ್ರ ಆರೋಗ್ಯ ಇಲಾಖೆ ಎಚ್ಚೆತ್ತುಕೊಂಡಿದೆ. ಕೆಮ್ಮಿನ ಸಿರಪ್ ಸೇವಿಸಿದ್ದ 9 ಮಕ್ಕಳು ಮಧ್ಯಪ್ರದೇಶದಲ್ಲಿ ಮೃತಪಟ್ಟಿದ್ದರೆ, ರಾಜಸ್ಥಾನದಲ್ಲಿ ಇಬ್ಬರು ಮಕ್ಕಳು ಸಾವನ್ನಪ್ಪಿದ್ದಾರು. ಈ ಘಟನೆಗಳ ಬೆನ್ನಲ್ಲೇ ಕೇಂದ್ರ ಆರೋಗ್ಯ ಇಲಾಖೆ ಎಲ್ಲಾ ರಾಜ್ಯಗಳಿಗೂ ಖಡಕ್ ಎಚ್ಚರಿಕೆ ನೀಡಿದೆ.
ಎರಡು ವರ್ಷದೊಳಗಿನ ಮಕ್ಕಳಿಗೆ ಯಾವುದೇ ಕೆಮ್ಮು, ಶೀತಗಳ ಸಿರಪ್ ನೀಡುವಂತಿಲ್ಲ. ಸಿರಪ್ ಸೇವಿಸದೆಯೂ ಮಕ್ಕಳಲ್ಲಿ ಕೆಮ್ಮು, ಶೀತಗಳು ವಾಸಿಯಾಗುತ್ತವೆ ಎಂದು ಕೇಂದ್ರ ಆರೋಗ್ಯ ಇಲಾಖೆ ತಿಳಿಸಿದೆ.
ಕೆಮ್ಮಿನ ಸಿರಪ್ ಮಾದರಿಗಳ ಪರೀಕ್ಷೆಗಳು ಡೈಥಿಲೀನ್ ಗ್ಲೈಕಾಲ್ ಅಥವಾ ಎಥಿಲಿನ್ ಗ್ಲೈಕಾಲ್ ನ್ನು ಒಳಗೊಂಡಿಲ್ಲ. ಇದು ಗಂಭೀರವಾದ ಕಿಡ್ನಿ ಸಮಸ್ಯೆಯನ್ನು ಉಂಟುಮಾಡುವ ಮಾಲಿನ್ಯಕಾರಕಗಳನ್ನು ಹೊಂದಿರುತ್ತದೆ ಎಂದು ತಿಳಿಸಿದೆ.
ಎರಡು ವರ್ಷಗಳ ಒಳಗಿನ ಮಕ್ಕಳಿಗೆ ಕೆಮ್ಮು ಸಿರಪ್ ನೀಡುವಂತಿಲ್ಲ. ಇವುಗಳನ್ನು ಸಾಮಾನ್ಯವಾಗಿ 5 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ಶಿಫಾರಸು ಮಾಡಬಾರದು. 5ಕ್ಕಿಂತ ಹೆಚ್ಚಿನ ವಯಸ್ಸಿನವರಿಗೆ ಸೂಕ್ತ ಡೋಸೆಜ್ ಗೆ ಅನುಗುಣವಾಗಿ ಸಿರಪ್ ನೀಡಬೇಕು ಎಂದು ಕೇಂದ್ರ ಆರೋಗ್ಯ ಸೇವೆಗಳ ಮಹಾನಿರ್ದೇಶಕಿ ಸುನಿತಾ ಶರ್ಮಾ ಎಲ್ಲಾ ರಾಜ್ಯಗಳಿಗೂ ಪತ್ರ ರವಾನಿಸಿದ್ದಾರೆ.
ಕೆಮ್ಮಿನ ಸಿರಪ್ ಸೇವಿಸಿದ್ದ 11 ಮಕ್ಕಳು ಸಾವನ್ನಪ್ಪಿದ ಪ್ರಕರಣದ ಬೆನ್ನಲ್ಲೇ ಕೇಂದ್ರ ಸರ್ಕಾರ ಈ ಮಹತ್ವದ ಆದೇಶ ಹೊರಡಿಸಿದೆ. ಕೆಮ್ಮಿನ ಸಿರಪ್ ಸೇವಿಸಿದ್ದ ಮೃತ 11ಮಕ್ಕಳು ತೀವ್ರ ಅಸ್ಥರಾಗಿ ಮೂತ್ರ ನಿಂತಿದ್ದು, ಮೈ ಊದಿಕೊಂಡಿದೆ. ಕಿಡ್ನಿ ವೈಫಲ್ಯಗೊಂಡು ಸಾವನ್ನಪ್ಪಿದ್ದಾರೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಮಕ್ಕಳಿಗೆ ಕೆಮ್ಮು ಹಾಗೂ ಶೀತಕ್ಕೆ ಸಿರಪ್ ನೀಡದಂತೆ ಸೂಚಿಸಲಾಗಿದೆ.