ಕಠ್ಮಂಡು: ಸೋಷಿಯಲ್ ಮೀಡಿಯಾ ನಿಷೇಧ, ಭ್ರಷ್ಟಾಚಾರದ ವಿರುದ್ಧ ನೇಪಾಳದಲ್ಲಿ ಯುವಜನತೆ ನಡೆಸುತ್ತಿರುವ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದೆ. ಸಂಸತ್ ಕಟ್ಟಡ, ಸರ್ಕಾರಿ ಕಚೇರಿಗಳಿಗೆ ಉದ್ರಿಕ್ತರ ಗುಂಪು ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದೆ. ಹಣಕಾಸು ಸಚಿವರನ್ನು ಬೀದಿಯಲ್ಲಿ ಅಟ್ಟಾಡಿಸಿಕೊಂಡು ಹೋಗಿ ಹಿಗ್ಗಾ ಮುಗ್ಗಾ ಥಳಿಸಿದ್ದಾರೆ.
ವಿತ್ತ ಸಚಿವ ಬಿಷ್ಣು ಪ್ರಸಾದ್ ಪೊಡೆಲ್ ಅವರ ಮನೆ ಮೇಲೆ ಕಲ್ಲು ತೂರಾಟ ನಡೆಸಿದ ಪ್ರತಿಭಟನಾಕಾರರು, ಸಚಿವರು ಮನೆಯಿಂದ ಹೊರಬರುತ್ತಿದ್ದಂತೆ ಅವರನ್ನು ಅಟ್ಟಾಡಿಸಿಕೊಂಡು ಹೋಗಿದ್ದಾರೆ. ಸಚಿವರು ರಸ್ತೆಯಲ್ಲಿ ಓಡಿ ತಪ್ಪಿಸಿಕೊಳ್ಳಲು ಯತ್ನಿಸಿದರೂ ಸಾಧ್ಯವಾಗಿಲ್ಲ, ಬೀದಿ ಬೀದಿಗಳಲ್ಲಿ ಸಚಿವರನ್ನು ಹಿಂಬಾಲಿಸಿಕೊಂಡು ಹೋಗಿ ಹೊಡೆದಿದ್ದಾರೆ. ಬಳಿಕ ಗುಂಪೊಂದು ಸಚಿವರನ್ನು ರಕ್ಷಿಸಿ ಕರೆದೊಯ್ದಿದೆ.
ಹಿಂಸಾತ್ಮಕ ಪ್ರತಿಭಟನೆಯ ವೇಳೆ ಮಾಜಿ ಪ್ರಧಾನಿ ಮೇಲೂ ಹಲ್ಲೆ ನಡೆಸಲಾಗಿದೆ. ಹಿರಿಯ ರಾಜಕೀಯ ನಾಯಕರ ಮನೆ, ಕಚೇರಿ, ಸರ್ಕಾರಿ ಕಟ್ಟಡ, ಸಂಸತ್ತಿನ ಮೇಲೆ ದಾಳಿ ನಡೆಸಿ ಕಟ್ಟಡಗಳಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರಧಾನಿ ಕೆ.ಪಿ.ಶರ್ಮಾ ಓಲಿ ರಾಜೀನಾಮೆ ಬೆನ್ನಲ್ಲೇ ನಾಲ್ವರು ಸಚಿವರು ಕೂಡ ರಾಜೀನಾಮೆ ನೀಡಿದ್ದಾರೆ.
ಸೋಷಿಯಲ್ ಮೀಡಿಯಾ ನಿಷೇಧ ಹಿಂಪಡೆದರೂ ಕೂಡ ನೇಪಾಳದಲ್ಲಿ ಹಿಂಸಾತ್ಮಕ ಪ್ರತಿಭಟನೆ ಮುಂದುವರೆದಿದ್ದು, ಎಲ್ಲೆಂದರಿಲ್ಲಿ ಬೆಂಕಿ, ಉದ್ರಿಕ್ತರಿಂದ ಮನಬಂದಂತೆ ದಾಳಿ ನಡೆಯುತ್ತಿದ್ದು, ಅಲ್ಲೋಲಕಲ್ಲೋಲ ಸೃಷ್ಟಿಯಾಗಿದೆ.