ಬೆಂಗಳೂರು: ಇತ್ತೀಚೆಗೆ ಅಪರಿಚಿತ ಯುವತಿ ಕೊಲೆ ಮಾಡಿ ಕೈಕಾಲುಗಳನ್ನು ಮಡಚಿ ಸೂಟ್ಕೇಸ್ ನಲ್ಲಿ ತುಂಬಿ ರೈಲ್ವೇ ಸೇತುವೆ ಕೆಳಗೆ ಎಸೆದು ಹೋಗಿದ್ದ ಪ್ರಕರಣವನ್ನು ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿನ ಸೂರ್ಯ ನಗರ ಠಾಣೆ ಪೋಲೀಸರು ಬಯಲಿಗೆಳೆದಿದ್ದು 7 ಜನ ಆರೋಪಿಗಳನ್ನು ಬಂಧಿಸಿದ್ದಾರೆ
ಬಿಹಾರ ಮೂಲದ ಹರ್ಷಿತ್ ಕುಮಾರ್ ಪ್ರಮುಖ ಆರೋಪಿಯಾಗಿದ್ದಾನೆ. ಮುಖೇಶ್ ರಾಜಬನ್ಷಿ, ಇಂದುದೇವಿ, ರಾಜರಾಮ್ ಕುಮಾರ್, ಪಿಂಟು ಕುಮಾರ್, ಕಾಲೂ ಕುಮಾರ್, ರಾಜು ಕುಮಾರ್ ಬಂಧಿಸಿದ್ದಾರೆ. ಮೇ 20ರಂದು 17 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ಹರ್ಷಿತ್ ಕುಮಾರ್ ಕೊಲೆ ಮಾಡಿದ್ದ. ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಆರೋಪಿ ಹರ್ಷಿತ್ ಕುಮಾರ್ ಕಾಚನಾಯಕನಹಳ್ಳಿಯಲ್ಲಿ ವಾಸವಾಗಿದ್ದ.
ಮೇ 13 ರಂದು ಬೆಂಗಳೂರಿನಿಂದ ಬಿಹಾರಕ್ಕೆ ತೆರಳಿದ್ದ ಹರ್ಷಿತ್ ಕುಮಾರ್ ಎರಡೇ ದಿನದಲ್ಲಿ ಪಕ್ಕದ ಗ್ರಾಮದ ಬಾಲಕಿಯನ್ನು ಬಲೆಗೆ ಕೆಡವಿಗಿದ್ದ. ಮೇ 15ರಂದು ಬಾಲಕಿಯ ಜೊತೆಗೆ ಬಿಹಾರದಿಂದ ಬೆಂಗಳೂರಿಗೆ ಹೊರಟಿದ್ದ. ಮೇ 18ರಂದು ಬಾಲಕಿಯ ಜೊತೆಗೆ ಬೆಂಗಳೂರು ತಲುಪಿದ್ದ ಆರೋಪಿ ಅಂದು ಬಾಲಕಿ ಜೊತೆಗೆ ಬೆಂಗಳೂರಿನಲ್ಲಿ ಸುತ್ತಾಡಿದ್ದ.
ರಾತ್ರಿ ವೇಳೆಗೆ ಸಂಬಂಧಿ ಮುಖೇಶ್ ಮನೆಗೆ ಕರೆದುಕೊಂಡು ಹೋಗಿದ್ದ. ಮರುದಿನ ಬಾಲಕಿ ಲೈಂಗಿಕ ಕ್ರಿಯೆಗೆ ಸಹಕರಿಸದ ಹಿನ್ನೆಲೆಯಲ್ಲಿ ಗಲಾಟೆ ಮಾಡಿದ್ದ ಬಿಯರ್ ಬಾಟಲಿಯಿಂದ ಬಾಲಕಿಯ ಖಾಸಗಿ ಅಂಗಕ್ಕೆ ಹೊಡೆದಿದ್ದ. ಬಾಲಕಿಯ ಮೇಲೆ ರಾಡ್ ನಿಂದ ಹಲ್ಲೆ ನಡೆಸಿ ಉಸಿರುಗಟ್ಟಿಸಿ ಕೊಲೆ ಮಾಡಿದ್ದ. ಬಾಲಕಿಯ ಹತ್ಯೆಯ ನಂತರ ಸಂಬಂಧಿಕರಿಗೆ ಮಾಹಿತಿ ನೀಡಿದ್ದ. ಬಾಲಕಿ ಶವವನ್ನು ಸೂಟ್ ಕೇಸ್ ನಲ್ಲಿ ತುಂಬಿ ಕ್ಯಾಬ್ ನಲ್ಲಿ ಸಾಗಿಸಿದ್ದರು.
ಹಳೆ ಚಂದಾಪುರ ರೈಲ್ವೆ ಸೇತುವೆ ಬಳಿ ಬಾಲಕಿ ಶವವನ್ನು ಎಸೆದಿದ್ದರು. ಮೇ 20ರಂದು ರಾತ್ರಿ ರೈಲ್ವೆ ಸೇತುವೆಯಿಂದ ಸೂಟ್ಕೇಸ್ ಕೆಳಗೆ ಎಸೆದಿದ್ದು, ಚಲಿಸುವ ರೈಲಿನಿಂದ ಸೂಟ್ಕೇಸ್ ಎಸೆದಿರುವಂತೆ ಬಿಂಬಿಸಲು ಯತ್ನಿಸಿದ್ದರು. ಬೆಂಗಳೂರು ತೊರೆದು 7 ಜನ ಆರೋಪಿಗಳು ಬಿಹಾರಕ್ಕೆ ಪರಾರಿಯಾಗಿದ್ದರು. ಆರೋಪಿಗಳ ಚಲನವಲನ ಸಿಸಿ ಕ್ಯಾಮರಾಗಳಲ್ಲಿ ಸೆರೆಯಾಗಿತ್ತು. ದೃಶ್ಯ ಆಧರಿಸಿ ಪೊಲೀಸರು ತನಿಖೆ ಕೈಗೊಂಡು ಬಿಹಾರಕ್ಕೆ ತೆರಳಿ 7 ಆರೋಪಿಗಳನ್ನು ಬಂಧಿಸಿದ್ದಾರೆ. ಸೂರ್ಯನಗರ ಠಾಣೆ ಪೋಲೀಸರಿಂದ ತನಿಖೆ ಮುಂದುವರೆದಿದೆ.