ಮನೆಯಿಂದ ಹೊರ ಹೋಗುವಾಗ ಜಾಸ್ತಿ ಪರ್ ಫ್ಯೂಮ್ ಹಾಕಿಕೊಂಡ ಪತ್ನಿಗೆ ಶೂಟ್ ಮಾಡಿದ ಪತಿ

ಭೋಪಾಲ್: ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ ಹೊರಗೆ ಹೋಗುವಾಗ ಸುಗಂಧ ದ್ರವ್ಯ ಹಾಕಿಕೊಂಡಿದ್ದಕ್ಕಾಗಿ ಪತ್ನಿಯೊಂದಿಗೆ ಜಗಳವಾಡಿದ ವ್ಯಕ್ತಿಯೊಬ್ಬ ಆಕೆಯ ಮೇಲೆ ಗುಂಡು ಹಾರಿಸಿದ್ದಾನೆ.

ಗಂಭೀರವಾಗಿ ಗಾಯಗೊಂಡಿದ್ದ ಮಹಿಳೆಯನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಘಟನೆಯ ನಂತರ ವ್ಯಕ್ತಿ ಸ್ಥಳದಿಂದ ಪರಾರಿಯಾಗಿದ್ದಾನೆ.

ಬಿಜೋಯಿಲಿ ಠಾಣಾ ವ್ಯಾಪ್ತಿಯ ಗಣೇಶಪುರ ನಿವಾಸಿ ನೀಲಂ ಜಾಧವ್ ಎಂಟು ವರ್ಷಗಳ ಹಿಂದೆ ಮಹೇಂದ್ರ ಜಾಧವ್ ಅವರನ್ನು ವಿವಾಹವಾಗಿದ್ದರು. ಕ್ರಿಮಿನಲ್ ಇತಿಹಾಸ ಹೊಂದಿರುವ(ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿರುವ) ಮಹೇಂದ್ರ ಜಾಧವ್ ಜೈಲು ಪಾಲಾದ ನಂತರ ನೀಲಂ ತನ್ನ ಪೋಷಕರೊಂದಿಗೆ ವಾಸಿಸುತ್ತಿದ್ದರು.

ನಾಲ್ಕು ವರ್ಷಗಳ ಶಿಕ್ಷೆಯನ್ನು ಅನುಭವಿಸಿದ ನಂತರ, ಮಹೇಂದ್ರ ಒಂದು ವರ್ಷದ ಹಿಂದೆ ಜೈಲಿನಿಂದ ಹೊರಬಂದಿದ್ದು, ಹೆಂಡತಿಯೊಂದಿಗೆ ಅವಳ ಪೋಷಕರ ಮನೆಯಲ್ಲೇ ವಾಸಿಸುತ್ತಿದ್ದ.

ಶನಿವಾರ ನೀಲಂ ತನ್ನ ಮನೆಯಿಂದ ಹೊರಡಲು ತಯಾರಿ ನಡೆಸುತ್ತಿದ್ದಾಗ ಸುಗಂಧ ದ್ರವ್ಯ ಹಾಕಿಕೊಂಡಿದ್ದು, ಈ ಬಗ್ಗೆ ಆಕ್ಷೇಪಿಸಿ ಮಹೇಂದ್ರ ಜಗಳವಾಡಿದ್ದಾನೆ. ದಂಪತಿಗಳ ನಡುವೆ ವಾಗ್ವಾದ ನಡೆದು ಜಗಳ ವಿಕೋಪಕ್ಕೆ ಹೋಗಿದ್ದು, ಕೋಪದ ಭರಾಟೆಯಲ್ಲಿ ಮಹೇಂದ್ರ ಗನ್ ತೆಗೆದು ಪತ್ನಿಯ ಎದೆಗೆ ಗುಂಡು ಹಾರಿಸಿದ್ದಾನೆ. ನೀಲಂ ನೆಲಕ್ಕೆ ಬಿದ್ದಿದ್ದು, ಆಕೆಯ ಸಹೋದರ ದಿನೇಶ್ ಜಾಧವ್ ಅವರು ತಕ್ಷಣ ಅವರ ಸಂಬಂಧಿಕರಿಗೆ ಕರೆ ಮಾಡಿ ಆಸ್ಪತ್ರೆಗೆ ಕರೆದೊಯ್ದರು.

ನೀಲಂ ಕುಟುಂಬದವರು ನೀಡಿದ ದೂರಿನ ಮೇರೆಗೆ ಮಹೇಂದ್ರ ವಿರುದ್ಧ ಕೊಲೆ ಯತ್ನ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆತನಿಗಾಗಿ ಹುಡುಕಾಟ ಆರಂಭಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read