ಜಬಲ್ಪುರ: ಮಧ್ಯಪ್ರದೇಶದ ಜಬಲ್ಪುರದಲ್ಲಿ ದುರ್ಗಾ ದೇವಿಯ ವಿಗ್ರಹವನ್ನು ಸಾಗಿಸುತ್ತಿದ್ದ ವಾಹನ ಹೈಟೆನ್ಷನ್ ವಿದ್ಯುತ್ ತಂತಿಗೆ ತಗುಲಿ ಇಬ್ಬರು ಸಾವನ್ನಪ್ಪಿದ್ದಾರೆ. ನಗರದ ಗೌರಾ ಬಜಾರ್ ಪ್ರದೇಶದಲ್ಲಿ ಭಾನುವಾರ ರಾತ್ರಿ ಈ ಘಟನೆ ನಡೆದಿದೆ.
ಅಪಘಾತದಲ್ಲಿ 30 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಅಂಜನಾ ತಿವಾರಿ ಮಾಹಿತಿ ಪ್ರಕಾರ, ವಿಗ್ರಹವನ್ನು ಸಾಗಿಸುತ್ತಿದ್ದ ಟ್ರಕ್ನ ಪೈಪ್ ಹೈಟೆನ್ಷನ್ ತಂತಿಗೆ ತಗುಲಿ ವಾಹನದಲ್ಲಿ ಕರೆಂಟ್ ಹರಿದಿದೆ. 33 ಜನರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
33 ಜನರನ್ನು ಆಸ್ಪತ್ರೆಗೆ ಕರೆತರಲಾಗಿದೆ. ಅವರು ಐಸಿಯು ಸೇರಿದಂತೆ ವಿವಿಧ ವಾರ್ಡ್ಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಕರ್ತವ್ಯದಲ್ಲಿರುವ ವೈದ್ಯ ನಿತಿನ್ ಯಾದವ್ ತಿಳಿಸಿದ್ದಾರೆ.
ಚಿಂಟು ವಿಶ್ವಕರ್ಮ(38) ಮತ್ತು ಅಖಿಲೇಶ್ ಪಟೇಲ್(48) ಮೃತಪಟ್ಟಿದ್ದಾರೆ. ಇವರು ಅವಘಡದ ಸಮಯದಲ್ಲಿ ವಾಹನದಲ್ಲಿದ್ದರು. ಘಟನೆಯ ಬಗ್ಗೆ ಮಾಹಿತಿ ತಿಳಿದ ರಾಜ್ಯ ಲೋಕೋಪಯೋಗಿ ಸಚಿವ ರಾಕೇಶ್ ಸಿಂಗ್, ಸ್ಥಳೀಯ ಶಾಸಕ ಅಶೋಕ್ ರೋಹಣಿ, ಜಿಲ್ಲಾಧಿಕಾರಿ ರಾಘವೇಂದ್ರ ಸಿಂಗ್ ಮತ್ತು ಪೊಲೀಸ್ ವರಿಷ್ಠಾಧಿಕಾರಿ ಸಂಪತ್ ಉಪಾಧ್ಯಾಯ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಗಾಯಾಳುಗಳಿಗೆ ಚಿಕಿತ್ಸೆ ನೀಡಲು ಸೂಚಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.