ಬಳ್ಳಾರಿ: ಹೆಣ್ಣು ಮಗು ಹುಟ್ಟಿದ್ದಕ್ಕೆ ತಾಯಿಯೇ ಎರಡು ತಿಂಗಳ ಹಸುಗೂಸನ್ನು ಕಾಲುವೆಗೆ ಎಸೆದು ಕೊಲೆ ಮಾಡಿದ ಘಟನೆ ಬಳ್ಳಾರಿ ಜಿಲ್ಲೆ ಸಂಡೂರು ತಾಲೂಕಿನ ತೋರಣಗಲ್ ನಲ್ಲಿ ನಡೆದಿದೆ.
ಪ್ರಿಯಾಂಕಾದೇವಿ ಮಗುವನ್ನು ಕಾಲುವಿಗೆ ಎಸೆದು ಕೊಲೆ ಮಾಡಿದ ಮಹಿಳೆಯಾಗಿದ್ದು, ಆಕೆಯನ್ನು ಪೊಲೀಸರು ಬಂಧಿಸಿದ್ದಾರೆ. ಪ್ರಿಯಾಂಕಾದೇವಿ ಪತಿ ಸರೋಜ್ ಕುಮಾರ್ ಖಾಸಗಿ ಕಂಪನಿಯಲ್ಲಿ ಸೂಪರ್ ವೈಸರ್ ಆಗಿ ಕೆಲಸ ಮಾಡುತ್ತಿದ್ದಾರೆ. ಬಿಹಾರ ಮೂಲದ ದಂಪತಿ ತೋರಣಗಲ್ ನಲ್ಲಿ ವಾಸವಾಗಿದ್ದರೆ. ದಂಪತಿಗೆ ಮೊದಲು ಇಬ್ಬರು ಹೆಣ್ಣು ಮಕ್ಕಳು ಜನಿಸಿದ್ದರು. ಮೂರನೇ ಮಗು ಕೂಡ ಹೆಣ್ಣಾಗಿದ್ದರಿಂದ ಪ್ರಿಯಾಂಕಾದೇವಿ ಮಗುವನ್ನು ಕಾಲುವೆಗೆ ಎಸೆದು ಕೊಲೆ ಮಾಡಿದ್ದಾಳೆ. ಬಳಿಕ ಮಗುವನ್ನು ಅಪಹರಿಸಲಾಗಿದೆ ಎಂದು ಗೋಳಾಡಿದ್ದಾಳೆ.
ಮಗು ಕಾಣೆಯಾದ ಬಗ್ಗೆ ಆಕೆಯ ಪತಿ ಸರೋಜ್ ಕುಮಾರ್ ತೋರಣಗಲ್ ಠಾಣೆ ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ತನಿಖೆ ಕೈಗೊಂಡು ಸಿಸಿ ಕ್ಯಾಮೆರಾ ಪರಿಶೀಲಿಸಿದಾಗ ತಾಯಿಯೇ ಮಗುವನ್ನು ಎತ್ತಿಕೊಂಡು ಹೋಗಿರುವುದು ಗೊತ್ತಾಗಿದೆ. ವಿಚಾರಣೆ ನಡೆಸಿದಾಗ ತಾನೇ ಮಗುವನ್ನು ಕೊಲೆ ಮಾಡಿರುವುದಾಗಿ ಪ್ರಿಯಾಂಕಾ ದೇವಿ ಒಪ್ಪಿಕೊಂಡಿದ್ದು, ಆಕೆಯನ್ನು ಪೊಲೀಸರು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ.