ಬಳ್ಳಾರಿ : ದೇಶದಲ್ಲಿ ಮೋದಿ ಸರಕಾರ ಆಡಳಿತಕ್ಕೆ ಬಂದಾಗಿನಿಂದ ರೈಲ್ವೇ ಇಲಾಖೆಯಲ್ಲಿ ಕ್ರಾಂತಿಕಾರ ಅಭಿವೃದ್ಧಿ ನಡೆದಿವೆ. ನಾನು ಅಧಿಕಾರ ವಹಿಸಿಕೊಂಡ ಕಡಿಮೆ ಅವಧಿಯಲ್ಲಿ ರಾಜ್ಯ ಸೇರಿ ಹಲವು ಕಡೆಗಳಲ್ಲಿ ಹೆಚ್ಚಿನ ರೈಲುಗಳನ್ನು ಮಂಜೂರು ಮಾಡಲಾಗಿದೆ ಎಂದು ಕೇಂದ್ರ ರಾಜ್ಯ ರೈಲ್ವೇ ಖಾತೆ ಮಂತ್ರಿ ವಿ.ಸೋಮಣ್ಣ ಅವರು ಹೇಳಿದರು.
ಬಳ್ಳಾರಿಯ ರೈಲ್ವೇ ಸ್ಟೇಷನ್ನ ವಿವಿಧ ಅಭಿವೃದ್ಧಿ ಕಾಮಗಾರಿಗಳ ಪಟಿಶೀಲನೆ ನಡೆಸಿ ಬಳಿಕ ಸುದ್ದಿಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು.
ನರೇಂದ್ರ ಮೋದಿ ಅವರ ಕನಸಿನಂತೆ ರೈಲ್ವೆ ಇಲಾಖೆಯಿಂದ ಕ್ರಾಂತಿಕಾರ ಕೆಲಸಗಳು ಆಗುತ್ತಿವೆ. 10 ವಂದೇಭಾರತ ರೈಲು ಓಡಿಸಲಾಗುತ್ತಿದೆ. ಇನ್ನು ಹೆಚ್ಚು ಮಾಡಲಾಗುತ್ತಿದ್ದು, ಸ್ಲೀಪರ್ ವಂದೇಭಾರತ ರೈಲು ಶೀಘ್ರ ಆರಂಭಿಸಲಾಗುತ್ತದೆ. ಯುಪಿಎ ಸರಕಾರದಲ್ಲಿ ನೆನೆಗುದಿಗೆ ಬಿದ್ದ ಎಲ್ಲ ಯೋಜನೆಗಳನ್ನು ಪೂರ್ಣಗೊಳಿಸಲಾಗುತ್ತಿದೆ. ಯುಪಿಎ ಸರಕಾರದಲ್ಲೇ ಕೇವಲ 3300 ಕೆಳ, ಮೇಲ್ಸೆತುವೆಗಳನ್ನು ನಿರ್ಮಾಣ ಮಾಡಿದ್ದರು. ನಾವು ಅಧಿಕಾರಕ್ಕೆ ಬಂದ ಬಳಿಕ 6600 ಕ್ಕೂ ಹೆಚ್ಚು ಬ್ರಿಜ್ ಕಟ್ಟಿದ್ದೇವೆ. ಇದರಿಂದ ಬಹುತೇಕ ರೈಲ್ವೆ ಸಮಸ್ಯೆಗಳು ಮುಗಿಯುತ್ತಿವೆ. ಇಂದು ಚಿಕ್ಕಮಗಳೂರು ತಿರುಪತಿ ಹೊಸ ರೈಲು ಉದ್ಘಾಟನೆ ಮಾಡಲಾಗಿದೆ. ನಾಲ್ಜೈದು ಹೊಸ ರೈಲುಗಳನ್ನ ರಾಜ್ಯದಲ್ಲಿ ಈಗ ಓಡಿಸಲಾಗುತ್ತಿದೆ ಎಂದು ತಿಳಿಸಿದರು.
ಮೋದಿಯವರು ಮೂರನೇ ಬಾರಿಗೆ ಪ್ರಧಾನಿಯಾದ ಬಳಿಕ ಕರ್ನಾಟಕವೂ ಅಭಿವೃದ್ಧಿಯಾಗಬೇಕಿದೆ. ಇದೇ ಕಾರಣಕ್ಕೆ ಹೆಚ್ಚಿನ ಆದ್ಯತೆ ಕೊಡಲಾಗುತ್ತಿದೆ. ಲೆವೆಲ್ ಕ್ರಾಸಿಂಗ್ ಬಗ್ಗೆ ರೈಲ್ವೆ ಇಲಾಖೆಗೆ ದೊಡ್ಡ ತಲೆನೋವಾಗಿತ್ತು. ಈಗ ಹಂತ-ಹಂತವಾಗಿ ಪರಿಹಾರ ಮಾಡಲಾಗಿದೆ ಎಂದರು.
ಚಿಕ್ಕಜಾಜೂರು-ಬಳ್ಳಾರಿ ರೈಲ್ವೆ ಡಬಲಿಂಗ್ ಕಾಮಗಾರಿ ಹಲವು ದಿನಗಳಿಂದ ನೆನೆಗುದಿಗೆ ಬಿದ್ದಿತ್ತು. ಇದಕ್ಕಾಗಿ ಕೇಂದ್ರ ಸರಕಾರ 3300 ಕೋಟಿ ರೂ. ನೀಡಲಾಗಿದೆ. ಕೆಲಸವೂ ಆರಂಭವಾಗಲಿದೆ. ಅಮೃತ ಸ್ಟೇಷನ್ ಯೋಜನೆಯಡಿ ಹಲವು ಕಡೆಗಳಲ್ಲಿ ರೈಲ್ವೇ ಸ್ಟೇಷನ್ಗಳ ಆಧುನೀಕರಣ ಕೈಗೆತ್ತಿಕೊಳ್ಳಲಾಗಿದೆ ಎಂದು ಹೇಳಿದರು.
ಎಲ್ಲದಕ್ಕೂ ಕಾಯಕಲ್ಪ: ಬಳ್ಳಾರಿ ಜಿಲ್ಲೆಯ ಸುತ್ತ 40 ಕಿ.ಮೀ. ಎಲ್ಲೂ ಕೂಡ ರೈಲ್ವೆ ಹಳಿ ಕ್ರಾಸ್ಗಳು ಇರದಂತೆ ಎಲ್ಲ ಕಡೆಗೂ ಎಲ್ಒಬಿ, ಆರ್ಒಬಿಗಳನ್ನು ನಿರ್ಮಾಣ ಮಾಡಲು ಯೋಜನೆ ರೂಪಿಸಲಾಗುತ್ತದೆ. ಶೀಘ್ರವೇ ನಾನು ಈ ಬಗ್ಗೆ ಆದೇಶ ಹೊರಡಿಸಿ ಸರ್ವೆ ಮಾಡಲು ಸೂಚನೆ ನೀಡುತ್ತೇನೆ. ಬಳ್ಳಾರಿಯ ಎಲ್ಲ ಕೆಲಸಗಳಿಗೂ ಆದ್ಯತೆ ನೀಡಲಾಗಿದೆ. ರೈಲ್ವೇ ಆಧುನೀಕರಣ ಕಾಮಗಾರಿ ಭರದಿಂದ ನಡೆದಿದೆ ಎಂದು ಹೇಳಿದರು.