ಮೈಸೂರು : ಮೈಸೂರಿನ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಡಿ.ಬಿ.ಕುಪ್ಪೆಯಲ್ಲಿ ದಸರಾ ಜಂಬೂಸವಾರಿಯಲ್ಲಿ 8 ಬಾರಿ ಚಿನ್ನದ ಅಂಬಾರಿ ಹೊತ್ತ ಅರ್ಜುನ ಆನೆಯ ಸ್ಮಾರಕವನ್ನು ಉದ್ಘಾಟಿಸಿ ಸಚಿವ ಈಶ್ವರ್ ಖಂಡ್ರೆ ನಮನ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಸಚಿವರು ಅರ್ಜುನ ಭೌತಿಕವಾಗಿ ನಮ್ಮ ಜೊತೆ ಇಲ್ಲದಿದ್ದರೂ, ಅವನು ಮಾಡಿದ ಸಾಹಸ, ತೀವ್ರ ಕಾರ್ಯಾಚರಣೆಗಳಲ್ಲಿ ತೋರಿದ ಧೈರ್ಯ, ಹಾಗೂ ದಸರಾ ಉತ್ಸವದಲ್ಲಿ ಹೊತ್ತಿರುವ ಚಿನ್ನದ ಅಂಬಾರಿಯ ಹೊನಲು ಎಲ್ಲವೂ ಜನಮನದಲ್ಲಿ ಸದಾ ಜೀವಂತವಾಗಿರಲಿದೆ.
5600 ಕೆ.ಜಿ. ತೂಕದ, 750 ಕೆ.ಜಿ. ಚಿನ್ನದ ಅಂಬಾರಿಯನ್ನು ಎಳೆಯುವ ಶಕ್ತಿ ಹೊಂದಿದ್ದ ಅರ್ಜುನ, ಮದಗಜ ಸೆರೆ ಕಾರ್ಯಾಚರಣೆ ವೇಳೆ ತನ್ನ ಪ್ರಾಣ ಬಲಿದಾನ ಮಾಡಿ ಅನೇಕ ಮಾವುತರು ಮತ್ತು ಅರಣ್ಯ ಸಿಬ್ಬಂದಿಯ ಜೀವ ಉಳಿಸಿದ. ಅವನನ್ನು ನಾವು ‘ಕ್ಯಾಪ್ಟನ್’ ಎಂದು ಕರೆಯುತ್ತಿದ್ದೆವು.
ಯಸಳೂರಿನ ದಬ್ಬಳ್ಳಿಕಟ್ಟೆಯಲ್ಲಿ ಸಮಾಧಿ ಮಾಡಿದ ಅರ್ಜುನನ ನೆನಪಿಗಾಗಿ ಈಗ ಬಳ್ಳೆ ಶಿಬಿರದಲ್ಲಿ 650 ಕೆ.ಜಿ ತೂಕದ, 2.98 ಮೀ ಎತ್ತರದ, 3.74 ಮೀ ಉದ್ದದ ಸ್ಮಾರಕವನ್ನು ಕಲಾವಿದ ಧನಂಜಯ ಅವರು ಕಬ್ಬಿಣದ ಮೂಲಕ ಅದ್ಭುತವಾಗಿ ನಿರ್ಮಿಸಿದ್ದಾರೆ. ಈ ಸ್ಮಾರಕ ಹಂತ ಹಂತವಾಗಿ ಅಭಿವೃದ್ಧಿ ಹೊಂದುತ್ತಾ, ಅರ್ಜುನನ ಸಾಹಸ ಹಾಗೂ ದಸರಾ ಮಹೋತ್ಸವದ ಅಪರೂಪದ ಕ್ಷಣಗಳ ನೋಟವನ್ನು ಸಾರ್ವಜನಿಕರಿಗೆ ತಲುಪಿಸಲಿದೆ ಎಂದರು.