ಮಂಡ್ಯ: ವೈದ್ಯರ ನಿರ್ಲಕ್ಷಕ್ಕೆ 7 ವರ್ಷದ ಬಾಲಕಿ ಸಾವನ್ನಪ್ಪಿರುವ ಘಟನೆ ಮಂಡ್ಯದಲ್ಲಿ ನಡೆದಿದೆ.
ಮೃತ ಬಾಲಕಿ ಪೋಷಕರು, ಕುಟುಂಬದವರು ಮಂಡ್ಯದ ಮಿಮ್ಸ್ ಆಸ್ಪತ್ರೆ ವೈದ್ಯರ ವಿರುದ್ಧ ಆರೋಪ ಮಾಡಿದ್ದಾರೆ. ಮಳವಳ್ಳಿಯ ನೆಲ್ಲೂರು ಗ್ರಾಮದ 7 ವರ್ಷದ ಬಾಲಕಿ ಸಾನ್ವಿ ಮೃತ ಬಾಲಕಿ. ಪಾದದ ಮೂಳೆ ಮುರಿತದಿಂದ ಚಿಕಿತ್ಸೆ ಪಡೆಯುತ್ತಿದ್ದ ಬಾಲಕಿ ಏಕಾಏಕಿ ಸಾವನ್ನಪ್ಪಿದ್ದಾಳೆ.
ಟೈಲ್ಸ್ ಬಿದ್ದು ಬಾಲಕಿಯ ಪಾದದ ಮೂಳೆ ಮುರಿದಿತ್ತು. ಮೇ 29 ರಂದು ಬಾಲಕಿಯನ್ನು ಮಿಮ್ಸ್ ಆಶ್ಪತ್ರೆಗೆ ದಾಖಲಿಸಲಾಗಿತ್ತು. ಎಲ್ಲಾ ಪರೀಕ್ಷೆಗಳ ಬಳಿಕ ರಾತ್ರಿ ಬಾಲಕಿಗೆ ಶಸ್ತ್ರಚಿಕಿತ್ಸೆ ನಡೆಸಲಾಗಿತ್ತು. ಆಪರೇಷನ್ ಬಳಿಕ ಬಾಲಕಿಯನ್ನು ವಾರ್ಡ್ ಗೆ ಶಿಫ್ಟ್ ಮಾಡಲಾಗಿತ್ತು. ಶುಕ್ರವಾರ ಬೆಳಿಗ್ಗೆ ಬಾಲಕಿಯ ಆರೋಗ್ಯದಲ್ಲಿ ಏರುಪೇರಾಗಿದೆ. ಬಳಿಕ ತೀವ್ರನಿಗಾಘಟಕದಲ್ಲಿ ಬಾಲಕಿಗೆ ಚಿಕಿತ್ಸೆ ನೀಡಲಾಗಿತ್ತು. ಶನಿವಾರ ಬೆಳಿಗ್ಗೆ ಡ್ರಿಪ್ಸ್ ಮೂಲಕ ಬಾಲಕಿಗೆ ಔಷಧಿ ಕೊಡಲಾಗಿತ್ತು. ಔಷಧಿ ಕೊಟ್ಟ ಬಳಿಕ ಬಾಲಕಿ ಪ್ರಜ್ಞೆ ಕಳೆದುಕೊಂಡಿದ್ದಳು.
ನಿನ್ನೆ ರಾತ್ರಿ ಬಾಲಕಿ ಸಾವನ್ನಪ್ಪಿದ್ದಾಳೆ ಎಂದು ವೈದ್ಯರು ಹೇಳಿದ್ದಾರೆ. ಮಗಳ ಸಾವಿಗೆ ವೈದ್ಯರ ನಿರ್ಲಕ್ಷವೇ ಕಾರಣ ಎಂದು ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆಸ್ಪತ್ರೆಯಲ್ಲಿ ಮೆಡಿಕಲ್ ವಿದ್ಯಾರ್ಥಿಗಳಿಂದ ಚಿಕಿತ್ಸೆ ನೀಡಿದ್ದೇ ಸಾವಿಗೆ ಕಾರಣ ಎಂದು ಕಣ್ಣಿರಿಟ್ಟಿದ್ದಾರೆ. ಆದರೆ ಮಿಮ್ಸ್ ಆರ್ ಎಂಒ ಡಾ.ದರ್ಶನ್ ಅಂಗಾಂಗ ವೈಫಲ್ಯದಿಂದ ಬಾಲಕಿ ಸಾವನ್ನಪ್ಪಿದ್ದಾಳೆ. ತನಿಖೆ ನಡೆಸಿ ಎಂದು ಹೇಳಿದ್ದಾರೆ.