ಮಂಗಳೂರು: ಸೇದಿ ಬಿಸಾಕಿದ್ದ ಬೀಡಿ ತುಂಡನ್ನು ಎತ್ತಿಕೊಂಡ ಮಗು ಅದನ್ನು ನುಂಗಿದ ಪರಿಣಾಮ ಗಂಟಲಲ್ಲಿ ಸಿಲುಕಿ ಸಾವನ್ನಪ್ಪಿರುವ ಹೃದಯವಿದ್ರಾವಕ ಘಟನೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದಿದೆ.
ಮಂಗಳೂರಿನ ಅಡ್ಯಾರ್ ನಲ್ಲಿ ವಾಸವಾಗಿದ್ದ ಬಿಹಾರ ಮೂಲದ ದಂಪತಿಯ 10 ತಿಂಗಳ ಮಗು ಬೀಡಿ ತುಂಡು ಗಂಟಲಲ್ಲಿ ಸಿಲುಕಿ ಸಾವನ್ನಪ್ಪಿದೆ. ಅನೀಶ್ ಎಂಬ ಹತ್ತು ತಿಂಗಳ ಕಂದ ಮೃತ ಮಗು.
ಬೀಡಿತುಂಡು ಗಂಟಲಲ್ಲಿ ಸಿಲುಕಿ ತೀವ್ರ ಅಸ್ವಸ್ಥಗೊಂಡಿದ್ದ ಮಗುವನ್ನು ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮಗು ಸಾವನ್ನಪ್ಪಿದೆ. ಘಟನೆಗೆ ಸಂಬಂಧಿಸಿದಂತೆ ಪತಿಯ ವಿರುದ್ಧ ಮಗುವಿನ ತಾಯಿ ಪೊಲೀಸ್ ಠಾನೆಯಲ್ಲಿ ದೂರು ನೀಡಿದ್ದಾರೆ.
ಸೇದಿದ ಬೀಡಿಯ ತುಂಡನ್ನು ಮನೆಯೊಳಗೆ ಬಿಸಾಕಬೇಡಿ ಎಂದು ಎಷ್ಟು ಬಾರಿ ಹೇಳಿದರೂ ಕೇಳದೇ ಪತಿ ಮತ್ತೆ ಮತ್ತೆ ಅದೇ ತಪ್ಪನ್ನು ಮಾಡುತ್ತಿದ್ದರು. ಮನೆಯಲ್ಲಿ ಬಿದ್ದಿದ್ದ ಬೀಡಿ ತುಂಡನ್ನು ಎತ್ತಿಕೊಂಡು ಮಗು ನುಂಗಿ, ದುರಂತ ಸಂಭವಿಸಿದೆ ಎಂದು ಮಗುವಿನ ತಾಯಿ ಲಕ್ಷ್ಮೀ ದೇವಿ ಕಣ್ಣೀರಿಟ್ಟಿದ್ದಾರೆ.