
ಕೋಲಾರ: ಕಾಂಗ್ರೆಸ್ ಸರ್ಕಾರದಲ್ಲಿ ದಿನದಿಂದ ದಿನಕ್ಕೆ ಸಚಿವಾಕಾಂಕ್ಷಿಗಳ ಪಟ್ಟಿ ಬೆಳೆಯುತ್ತಿದ್ದು, ಕೆಲ ಶಾಸಕರು ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಸಚಿವ ಸ್ಥಾನಕ್ಕಾಗಿ ಬೇಡಿಕೆ ಇಡುತ್ತಿರುವವರಿಗೆ ಶಾಸಕ ಕೊತ್ತೂರು ಮಂಜುನಾಥ್ ತಿರುಗೇಟು ನೀಡಿದ್ದಾರೆ.
ಸಚಿವ ಸ್ಥಾನ ಬೇಕೆನ್ನುವವರು ರಾಜೀನಾಮೆ ಕೊಟ್ಟು ಮನೆಯಲ್ಲಿರಲಿ. ಜನರು ನಮ್ಮನ್ನು ಆಯ್ಕೆ ಮಾಡಿದ್ದು ಅವರ ಸೇವೆ ಮಾಡಲಿಕ್ಕಾಗಿ, ಶಾಸಕರಾಗಿ ಜವಾಬ್ದಾರಿಯಿಂದ ಕೆಲಸ ಮಾಡಬೇಕಿದೆ ಎಂದು ಹೇಳಿದರು.
ಇನ್ನು ಆಪರೇಷನ್ ಕಮಲ ವಿಚಾರವಾಗಿ ಮಾತನಾಡಿದ ಶಾಸಕರು, ನಾವು 136 ಶಾಸಕರಿದ್ದೇವೆ. ನಮ್ಮ ಸರ್ಕಾರ ಬೀಳಿಸಲು ಆಗುವುದಿಲ್ಲ. ಅಂತಹ ಕನಸು ಯಾರೂ ಕಾಣುವುದು ಬೇಡ. ಸರ್ಕಾರವನ್ನು ಪತನಗೊಳಿಸುವ ಹೇಳಿಕೆ ಕೇವಲ ಊಹಾಪೋಹ ಎಂದರು.
ಶಾಸಕ ರವಿ ಗಣಿಗಗೆ ಬಿಜೆಪಿ ಆಫರ್ ನೀಡಿರುವ ವಿಚಾರ ನನಗೆ ಗೊತ್ತಿಲ್ಲ. ನನ್ನ ಬಳಿ ಈ ವಿಚಾರವಾಗಿ ಯಾರೂ ಸಂಪರ್ಕ ಮಾಡಿಲ್ಲ ಎಂದು ಹೇಳಿದರು.