
ಬೆಂಗಳೂರು: ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವಾಗ ಸರ್ಕಾರದ ವಿವಿಧ ಉನ್ನತ ಅಧಿಕಾರಿಗಳು ಹಲವು ವಿಚಾರಕ್ಕೆ ಸಂಬಂಧಿಸಿದಂತೆ ಸಭೆ ಮತ್ತು ವಿಡಿಯೋ ಸಂವಾದ ನಡೆಸಿರುವುದಕ್ಕೆ ರಾಜ್ಯ ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾ ಗರಂ ಆಗಿದ್ದಾರೆ.
ತುರ್ತು ವಿಷಯ ಹೊರತಾಗಿ ಇನ್ನುಳಿದ ವಿಚಾರಗಳ ಸಭೆ ಮತ್ತು ವಿಡಿಯೋ ಸಂವಾದ ನಡೆಸಿದಂತೆ ತಾಕೀತು ಮಾಡಿದ್ದಾರೆ. ಈ ಕುರಿತಾಗಿ ಸರ್ಕಾರದ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯಲ್ ಅವರಿಗೆ ರಾಜ್ಯ ಮುಖ್ಯ ಚುನಾವಣಾ ಅಧಿಕಾರಿ ಪತ್ರ ಬರೆದಿದ್ದಾರೆ.
ಲೋಕಸಭೆ ಚುನಾವಣೆ ಮತ್ತು ವಿಧಾನ ಪರಿಷತ್ ಚುನಾವಣೆ ಸಂಬಂಧ ರಾಜ್ಯದಲ್ಲಿ ನೀತಿ ಸಂಹಿತೆ ಜಾರಿಯಲ್ಲಿರುವಾಗ ಕೆಲವು ಇಲಾಖೆಯ ಕಾರ್ಯದರ್ಶಿಗಳು, ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳು, ಪ್ರಧಾನ ಕಾರ್ಯದರ್ಶಿಗಳು ಸೇರಿ ಇತರೆ ಉನ್ನತ ಅಧಿಕಾರಿಗಳು ಸಭೆ, ವಿಡಿಯೋ ಸಂವಾದ ನಡೆಸಿದ ಬಗ್ಗೆ ಚುನಾವಣಾ ಅಧಿಕಾರಿಗಳ ಕಚೇರಿಗೆ ಮಾಹಿತಿ ಬಂದಿದೆ. ಇದರಿಂದ ಚುನಾವಣಾ ಕಾರ್ಯನಿರ್ವಹಣೆಗೆ ಅಡಚಣೆಯಾಗಿದೆ. ತಕ್ಷಣವೇ ಸಭೆ ಮತ್ತು ವಿಡಿಯೋ ಸಂವಾದ ಸ್ಥಗಿತಗೊಳಿಸಬೇಕು. ಈಗಾಗಲೇ ಸಭೆ ನಿಗದಿಯಾಗಿದ್ದಲ್ಲಿ ಮುಂದೂಡಬೇಕು. ತುರ್ತು ಅಗತ್ಯವಿದ್ದರೆ ಮುಖ್ಯ ಚುನಾವಣಾಧಿಕಾರಿ ಕಚೇರಿ ಅನುಮತಿ ಪಡೆದು ಸಭೆ, ವಿಡಿಯೋ ಸಂವಾದ ನಡೆಸಬೇಕು ಎಂದು ತಿಳಿಸಲಾಗಿದೆ.