ಬೆಂಗಳೂರು : ‘ಹುಬ್ಬಳ್ಳಿ ಇನ್ಸ್ಪೆಕ್ಟರ್’ ರನ್ನು ಅಮಾನತು ಮಾಡಲ್ಲ, ಅವರು ಕಡ್ಡಾಯ ರಜೆ ಮೇಲೆ ಹೋಗಿಲ್ಲ ಎಂದು ಗೃಹ ಸಚಿವ ಜಿ.ಪರಮೇಶ್ವರ್ ಸ್ಪಷ್ಟನೆ ನೀಡಿದ್ದಾರೆ.
ಇಂದು ಸುದ್ದಿಗಾರರ ಜೊತೆ ಮಾತನಾಡಿದ ಅವರು ಹುಬ್ಬಳ್ಳಿ ಇನ್ಸ್ಪೆಕ್ಟರ್ನನ್ನು ಅಮಾನತು ಮಾಡಬೇಕು ಎಂಬ ಬಿಜೆಪಿ ಆಗ್ರಹ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದರು. ಅವರನ್ನು ಯಾಕೆ ಅಮಾನತು ಮಾಡಬೇಕು..? ಅವರೇನು ತಪ್ಪು ಮಾಡಿದ್ದಾರೆ ಎಂದರು. ರಾಜ್ಯದಲ್ಲಿ ಕಾನೂನು ಕಾಪಾಡೋದು ನಮ್ಮ ಕರ್ತವ್ಯ. ಕಾನೂನಿನ ಪ್ರಕಾರ ಹುಬ್ಬಳ್ಳಿ ಪೊಲೀಸರು ಕ್ರಮ ತೆಗೆದುಕೊಂಡಿದ್ದಾರೆ. ಬಿಜೆಪಿ ಅವರು ಅನಾವಶ್ಯಕವಾಗಿ ಇದನ್ನು ದೊಡ್ಡದು ಮಾಡಿ ರಾಜಕೀಯ ಕಾರಣಕ್ಕೆ ಹೋರಾಟ ಮಾಡುತ್ತಿದ್ದಾರೆ. ಅವರು ಪ್ರತಿಭಟನೆ ಮಾಡಲಿ, ನಾವು ಏನು ಮಾಡಬೇಕೋ ಅದನ್ನು ಮಾಡುತ್ತೇವೆ ಎಂದರು.
ಕರಸೇವಕರ ಬಂಧನ ಖಂಡಿಸಿ ವಿಪಕ್ಷ ಬಿಜೆಪಿ ರಾಜ್ಯಾದ್ಯಂತ ಪ್ರತಿಭಟನೆ ತೀವ್ರಗೊಳಿಸಿರುವ ಬೆನ್ನಲ್ಲೇ ಹುಬ್ಬಳ್ಳಿ ಶಹರ ಠಾಣೆ ಇನ್ಸ್ ಪೆಕ್ಟರ್ ರನ್ನು ಕಡ್ಡಾಯ ರಜೆ ಮೇಲೆ ಕಳುಹಿಸಲಾಗಿದೆ ಎನ್ನಲಾಗಿದೆ. ಕರಸೇವಕ ಶ್ರೀಕಾಂತ್ ಪೂಜಾರಿ ಬಂಧನ ಖಂಡಿಸಿ ಜನವರಿ 3ರಂದು ವಿಪಕ್ಷ ನಾಯಕ ಆರ್.ಅಶೋಕ್ ನೇತೃತ್ವದಲ್ಲಿ ಹುಬ್ಬಳ್ಳಿ ಶಹರ ಠಾಣೆಗೆ ಮುತ್ತಿಗೆ ಹಾಕಲು ಬಿಜೆಪಿ ಕಾರ್ಯಕರ್ತರು ಯತ್ನಿಸಿದ್ದರು. ಅಲ್ಲದೇ ಶಹರ ಠಾಣೆ ಇನ್ಸ್ ಪೆಕ್ಟರ್ ಮೊಹಮ್ಮದ್ ರಫೀಕ್ ಅವರನ್ನು ಸಸ್ಪೆಂಡ್ ಮಾಡುವಂತೆ ಆಗ್ರಹಿಸಿದ್ದರು.