
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರಿಂದ ಉದ್ಘಾಟನೆಗೊಂಡ ಮೂರೇ ದಿನದಲ್ಲಿ ಗಂಗಾ ವಿಲಾಸ್ ಕ್ರೂಸ್ ಆಳವಿಲ್ಲದ ನೀರಲ್ಲಿ ಸಿಲುಕಿಕೊಂಡಿದೆ.
ತನ್ನ 51 ದಿನಗಳ ಪ್ರಯಾಣದ ಮೂರನೇ ದಿನದಲ್ಲಿ ಬಿಹಾರದ ಛಪ್ರಾದಲ್ಲಿ ಆಳವಿಲ್ಲದ ನೀರಲ್ಲಿ ಗಂಗಾ ವಿಲಾಸ್ ಕ್ರೂಸ್ ಸಿಲುಕಿಕೊಂಡಿದೆ.
ಜನವರಿ 13 ರಂದು ನೌಕಾಯಾನ ಆರಂಭಿಸಿದ ಗಂಗಾ ವಿಲಾಸ್ ಕ್ರೂಸ್ ಛಾಪ್ರಾದಿಂದ 11 ಕಿಮೀ ಆಗ್ನೇಯಕ್ಕೆ ಐತಿಹಾಸಿಕವಾಗಿ ಮಹತ್ವದ ಪ್ರದೇಶವಾದ ಚಿರಂದ್ ಸರನ್ ಬಳಿ ಡಾಕ್ ಮಾಡಬೇಕಿತ್ತು. ಡೋರಿಗಂಜ್ ಜಿಲ್ಲೆಯ ಸಮೀಪವಿರುವ ‘ಆಳವಿಲ್ಲದ ನೀರು’ ಅದರ ಪ್ರಯಾಣಕ್ಕೆ ಅಡ್ಡಿಯಾಯಿತು.
ಕ್ರೂಸ್ ಸಿಕ್ಕಿಹಾಕಿಕೊಂಡ ಮಾಹಿತಿ ಅಧಿಕಾರಿಗಳನ್ನು ತಲುಪಿದ ನಂತರ, ರಾಜ್ಯ ವಿಪತ್ತು ನಿರ್ವಹಣಾ ಪಡೆ(SDRF) ತಂಡ ಆಗಮಿಸಿ ಚಿರಂದ್ ಸರನ್ಗೆ ಪ್ರಯಾಣಿಸಲು ಅನುಕೂಲವಾಗುವಂತೆ ಸಣ್ಣ ದೋಣಿಯಲ್ಲಿ ಪ್ರವಾಸಿಗರನ್ನು ರಕ್ಷಿಸಿದೆ. ಪ್ರವಾಸಿಗರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಲಾಗಿದೆ.ನೀರು ಕಡಿಮೆ ಇರುವ ಕಾರಣ ಕ್ರೂಸ್ ದಡಕ್ಕೆ ತರಲು ತೊಂದರೆಯಾಗಿದೆ. ಆದ್ದರಿಂದ ಸಣ್ಣ ದೋಣಿಗಳ ಮೂಲಕ ಪ್ರವಾಸಿಗರನ್ನು ಕರೆತರುವ ಪ್ರಯತ್ನ ಮಾಡಲಾಗುತ್ತಿದೆ ಎಂದು ಛಾಪ್ರಾದ ಸಿಒ ಸತೇಂದ್ರ ಸಿಂಗ್ ತಿಳಿಸಿದ್ದಾರೆ.