ಬೆಂಗಳೂರು: ರಾಜ್ಯ ವಿಧಾನ ಮಂಡಲ ಮುಂಗಾರು ಅಧಿವೇಶನ ಇಂದಿನಿಂದ ಆರಂಭವಾಗಲಿದ್ದು, ಆಗಸ್ಟ್ 22ರ ವರೆಗೆ ನಡೆಯಲಿದೆ.
ರಾಜ್ಯದಲ್ಲಿ ರಸಗೊಬ್ಬರ ಸಮಸ್ಯೆ, ಚಿನ್ನಸ್ವಾಮಿ ಸ್ಟೇಡಿಯಂ ಬಳಿ 11 ಜನ ಮೃತಪಟ್ಟ ಕಾಲ್ತುಳಿತ ಪ್ರಕರಣ, ಒಳ ಮೀಸಲಾತಿ ವಿಳಂಬ, ಅನುದಾನ ತಾರತಮ್ಯ, ಜಾತಿ ಸಮೀಕ್ಷೆ, ಸಾರಿಗೆ ನೌಕರರ ಮುಷ್ಕರ, ಗೃಹಲಕ್ಷ್ಮಿ ಹಣ ವಿಳಂಬ, ಇ-ಖಾತಾ ಸೇರಿ ಹಲವು ವಿಷಯಗಳನ್ನು ಮುಂದಿಟ್ಟು ಸರ್ಕಾರದ ಮೇಲೆ ಮುಗಿಬೀಳಲು ವಿಪಕ್ಷಗಳು ಸಜ್ಜಾಗಿವೆ. ವಿಪಕ್ಷಗಳಿಗೆ ತಿರುಗೇಟು ನೀಡಲು ಸರ್ಕಾರ ಕೂಡ ಸಿದ್ಧತೆ ಮಾಡಿಕೊಂಡಿದ್ದು, 20 ಮಸೂದೆಗಳನ್ನು ಮಂಡಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ.
ಇಂದು ಬೆಳಿಗ್ಗೆ 11 ಗಂಟೆಗೆ ಸದನ ಸಮಾವೇಶಗೊಳ್ಳಲಿದ್ದು, ಇತ್ತೀಚೆಗೆ ಆಗಲಿದ ಗಣ್ಯರಿಗೆ ಸಂತಾಪ ಸೂಚಿಸಲಾಗುವುದು. ಬಜೆಟ್ ಅಧಿವೇಶನದಲ್ಲಿ ಬಿಜೆಪಿ 18 ಶಾಸಕರನ್ನು ಅಮಾನತುಗೊಳಿಸಿದ್ದು, ಅದನ್ನು ಹಿಂಪಡೆಯಲಾಗಿತ್ತು. ಈ ಕುರಿತ ಸ್ಥಿರೀಕರಣ ಪ್ರಸ್ತಾವ ಮಂಡನೆಯಾಗಲಿದೆ. ಇದಕ್ಕೆ ವಿಧಾನಸಭೆಯ ಅನುಮೋದನೆ ನೀಡಬೇಕಿದೆ. ನಂತರ ಪ್ರಶ್ನೋತ್ತರ ಹಾಗೂ ಗಮನ ಸೆಳೆಯುವ ಸೂಚನೆ ಕಲಾಪ ನಡೆಯಲಿದೆ.